ಐದನೇ ವಾರ ಮನೆಯಿಂದ ಯಾರು ಹೊರ ಹೋಗ್ತಾರೆ ಅನ್ನೋ ತವಕಕ್ಕೆ ತೆರೆ ಬಿದ್ದಿದೆ. ಮನೆಯ ಹಿರಿಯ ಸ್ಪರ್ಧಿ ಶಂಕರ್ ಅಶ್ವಥ್ ಈ ಬಿಗ್ಬಾಸ್ ನಿಂದ ಹೊರ ಬಂದಿದ್ದಾರೆ.
ಮನೆಯಿಂದ ಹೊರ ಬಂದ ಬಳಿಕ ಮಾತನಾಡಿದ ಶಂಕರ್ ಅಶ್ವಥ್, 35 ದಿನ ಸಾಕಾಯ್ತಾ ಅನ್ನಿಸಲ್ಲ. ಆದ್ರೆ ಮನೆಯಲ್ಲಿ ಮನಸ್ಸಿದೆ. ಶಕ್ತಿ ಮೀರಿ ನೀಡಿದ ಟಾಸ್ಕ್ ಮಾಡಿದೆ. ನನಗೆ ಸ್ಪೈನಲ್ ಕಾರ್ಡ್ ಆಪರೇಷನ್ ಆಗಿದೆ. ಟಾಸ್ಕ್ ವೇಳೆ ಏನಾದ್ರೂ ಆದ್ರೆ ಅನ್ನೋ ಭಯ. 82 ವಯಸ್ಸಿನ ತಾಯಿ ಇದ್ದಾರೆ. ಹೆಂಡ್ತಿ ಇದ್ದಾರೆ. ಇವರಿಗೆಲ್ಲ ನಾನು ಭಾರ ಆಗ್ತೀನಿ ಅನ್ನೋ ಭಯ ಶುರುವಾಗಿತ್ತು ಎಂದರು.
ನಿಧಿ ಸುಬ್ಬಯ್ಯ, ಶಮಂತ್ ಗೌಡ, ನಿಧಿ ಸುಬ್ಬಯ್ಯ, ಅರವಿಂದ್ ಮತ್ತು ಶಂಕರ್ ಅಶ್ವಥ್ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದರು. ಅಂತಿಮವಾಗಿ ಶಂಕರ್ ಅಶ್ವಥ್ ಹೊರ ಬಂದಿದ್ದು, ಕಳೆದ ವಾರ ಕೇಳಿ ಬಂದಿದ್ದ ಗಾಳಿ ಸುದ್ದಿಗಳಿಗೆ ಪೂರ್ಣ ವಿರಾಮ ಬಿದ್ದಿದೆ. ನಾಲ್ಕನೇ ವಾರ ಎಲಿಮಿನೇಟ್ ಆಗಿದ್ದ ಚಂದ್ರಕಲಾ ಮೋಹನ್ ಪ್ರಕಾರ ತಮ್ಮ ನಂತರ ನಿಧಿ ಔಟ್ ಆಗ್ತಾರೆ ಎಂದು ಗೆಸ್ ಮಾಡಿದ್ದರು.
ಮೊದಲ ವಾರ ಟಿಕ್ಟಾಕ್ ಚೆಲುವೆ ಧನುಶ್ರೀ, ಎರಡನೇ ವಾರ ನಿರ್ಮಲಾ ಚೆನ್ನಪ್ಪ, ಮೂರನೇ ವಾರ ಗೀತಾ ಭಾರತಿ ಮತ್ತು ನಾಲ್ಕನೇ ವಾರ ಚಂದ್ರಕಲಾ ಮೋಹನ್ ಹೊರ ಬಂದಿದ್ದರು. ಸತತವಾಗಿ ಮಹಿಳಾ ಸ್ಪರ್ಧಿಗಳೇ ಹೊರ ಬಂದಿದ್ದರಿಂದ ಸೇವ್ ಆಗಿದ್ದವರು ನಾವು ಸ್ಟ್ರಾಂಗ್ ಆಗಬೇಕೆಂದು ಮಾತಾಡಿಕೊಂಡಿದ್ದರು.
ಈ ವಾರ ಕಳಪೆ ಪ್ರದರ್ಶನ ನೀಡಿದ್ದ ಸ್ಪರ್ಧಿಯೆಂದು ಶಂಕರ್ ಅಶ್ವಥ್ ಅವರನ್ನ ಮನೆ ಮಂದಿ ಆಯ್ಕೆ ಮಾಡಿದ್ದರು. ಇತ್ತ ದಿವ್ಯಾ ಸುರೇಶ್ ಬೆಸ್ಟ್ ಪ್ಲೇಯರ್ ಆಗಿದ್ದರು. ಈ ವಾರ ಮಂಜು ಪಾವಗಡ ಮನೆಯ ಕ್ಯಾಪ್ಟನ್ ಆಗಿದ್ದಾರೆ.