– ಬಿಎಸ್ವೈ ಕುರ್ಚಿ ಬಗ್ಗೆ ಇನ್ನೂ ಸಸ್ಪೆನ್ಸ್
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾರ್ಯವೈಖರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಹುಪರಾಕ್ ಹೇಳಿದ್ದಾರೆ.
ಸಂಜೆ ವಿಧಾನಸೌಧದಲ್ಲಿ ಗೃಹ ಇಲಾಖೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಯಡಿಯೂರಪ್ಪ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಉತ್ತಮ ಅಭಿವೃದ್ಧಿ ಮಾಡಿದೆ, ಅವರಿಗೆ ಅಭಿನಂದನೆ. ಯಡಿಯೂರಪ್ಪ ನೇತ್ರತ್ವದ ಸರ್ಕಾರ ಕರ್ನಾಟಕದಲ್ಲಿ ಕೊರೊನಾ ಸಂಕಷ್ಟದಲ್ಲಿ ಬಹಳ ಉತ್ತಮವಾಗಿ ಕೆಲಸ ಮಾಡಿದೆ ಎಂದು ಸಿಎಂ ಯಡಿಯೂರಪ್ಪಗೆ ಅಮಿತ್ ಶಾ ಬಹುಪರಾಕ್ ಹೇಳಿದ್ದಾರೆ.
ಕಾಂಗ್ರೆಸ್ಗೆ ತಿರುಗೇಟು ನೀಡಿದ ಅವರು, ರಾಜ್ಯದಲ್ಲಿ ಬಿಜೆಪಿ ಪೂರ್ಣಾವಧಿ ಪೂರೈಸಲಿದೆ, ಮುಂದೆಯೂ ಐದು ವರ್ಷ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ. ಯಡಿಯೂರಪ್ಪ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಉತ್ತಮ ಅಭಿವೃದ್ಧಿ ಮಾಡಿದೆ. ಕಾಂಗ್ರೆಸ್ನವರಿಗೆ ಬಿಜೆಪಿಯಲ್ಲಿ ಯಾವ ದೋಷಗಳೂ ಸಿಗಲ್ಲ. ಕರ್ನಾಟಕ ಸರ್ಕಾರಕ್ಕೆ ಕೇಂದ್ರದ ಬೆಂಬಲ ಸದಾ ಇರಲಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಎರಡೂ ಸೇರಿ ರಾಜ್ಯದ ವಿಕಾಸ ಮಾಡ್ತೇವೆ. ಯಡಿಯೂರಪ್ಪ ಉತ್ತಮ ಕಾರ್ಯ ಮಾಡುತ್ತಿದ್ದಾರೆ, ಅವರಿಗೆ ಅಭಿನಂದನೆ ಎಂದರು. ಆದರೆ ಬಿಜೆಪಿ ಸರ್ಕಾರ ಪೂರ್ಣಾವಧಿ ಪೂರೈಸಲಿದೆ ಎಂದು ಹೇಳಿದರೇ ಹೊರತು ಯಡಿಯೂರಪ್ಪ ಉಳಿದ ಅವಧಿಗೂ ಸಿಎಂ ಆಗಿರುತ್ತಾರೆ ಎಂದು ಹೇಳಲಿಲ್ಲ. ಹೀಗಾಗಿ ಈ ಕುರಿತು ಭಾರೀ ಚರ್ಚೆ ನಡೆಯುತ್ತಿದೆ.
ಕೊರೊನಾ ಸಮಯದಲ್ಲಿ ರಾಜ್ಯದ ಪೋಲಿಸರು, ಅದರಲ್ಲೂ ಬೆಂಗಳೂರು ಪೋಲಿಸರು ಬಹಳ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಎಲ್ಲರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಆದರೆ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಮತ್ತು ಸಿಎಂ ಕೊಠಡಿಗೆ ಭೇಟಿ ಕಾರ್ಯಕ್ರಮಗಳನ್ನು ರದ್ದು ಮಾಡಲಾಯಿತು. ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಲು ವಿಧಾನಸೌಧದಿಂದ ನೇರವಾಗಿ ಖಾಸಗಿ ಹೊಟೇಲಿಗೆ ತೆರಳಿದರು.