ಮಡಿಕೇರಿ: ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಚಿವ ಈಶ್ವರಪ್ಪ ಅವರು ಬೇರೆ ಅಂತ ನೀವು ತಿಳಿದುಕೊಂಡಿರಬಹುದು. ಆದರೆ ಅವರಿಬ್ಬರು ಒಂದೇ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಮಡಿಕೇರಿಯ ಬಾಗಮಂಡಲ ಸಮೀಪದ ಕೋರಂಗಾಲದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಬಿಜಿಪಿ ಸರ್ಕಾರದಲ್ಲಿ ಸಾಕಷ್ಟು ಒಳಜಗಳ ಗೊಂದಲಗಳಿದ್ದು, ಅವುಗಳನ್ನು ಪಂಚ ರಾಜ್ಯಗಳ ಚುನಾವಣೆ ಬಳಿಕ ರಾಜ್ಯ ಉಸ್ತುವಾರಿ ಸರಿಪಡಿಸಲಿದ್ದಾರೆ ಎಂದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಪ್ರತಿಕ್ರಿಯಿಸಿ ಯಾವುದೇ ಸರ್ಕಾರಗಳಿದ್ದಾಗ ಗೊಂದಲ, ಸಣ್ಣ ಪುಟ್ಟ ವ್ಯತ್ಯಾಸಗಳಿರುತ್ತವೆ ಎಂದಿದ್ದಾರೆ.
ಆಗಾಗ ಕೆಲವೊಮ್ಮೆ ಗುಡುಗು ಸಿಡಿಲು ಬಂದು ಹೋಗುತ್ತವೆ. ಆದರೆ ಅದೆಲ್ಲವೂ ತಣ್ಣಗಾಗಿ ಸರಿಯಾಗಿ, ಸುಸೂತ್ರವಾಗಿ ನಡೆದುಕೊಂಡು ಹೋಗುತ್ತವೆ. ನಮ್ಮ ಮುಖ್ಯಮಂತ್ರಿಗಳು ಸಮರ್ಥರಿದ್ದು ಉತ್ತಮ ಮತ್ತು ಬಡವರ ಪರವಾದ ಹಾಗೂ ಅಭಿವೃದ್ಧಿಯ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದರು.