ಕಲಬುರಗಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉತ್ತಮ ಆಡಳಿತ ನೀಡುತ್ತಿದ್ದಾರೆ. ಒಂದು ವೇಳೆ ಅವರಿಗೆ ಕೇಂದ್ರ ಅಥವಾ ರಾಜ್ಯದವರು ತೊಂದರೆ ನೀಡಿದರೆ ಎಲ್ಲಾ ಮಠಾಧೀಶರು ರಾಜ್ಯವ್ಯಾಪಿ ಹೋರಾಟ ನಡೆಸುತ್ತೇವೆ ಎಂದು ಪ್ರಗತಿಪರ ಮಠಾಧೀಶರ ವೇದಿಕೆ ರಾಜ್ಯ ಕಾರ್ಯಧ್ಯಕ್ಷ ಶ್ರೀಶೈಲ ಸಾರಂಗ ಮಠದ ಪೀಠಾಧಿಪತಿ ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು ಯಡಿಯೂರಪ್ಪ ಅವರು ಕೇವಲ ಲಿಂಗಾಯತ ನಾಯಕರಲ್ಲ, ಎಲ್ಲ ಜಾತಿ ಸಮುದಾಯದ ನಾಯಕರಾಗಿದ್ದಾರೆ. ಅವರು ಬಿಜೆಪಿಯನ್ನು ಬೇರು ಮಟ್ಟದಿಂದ ಬೆಳೆಸಿ ಸಿಎಂ ಆಗಿದ್ದಾರೆ. ಆದರೆ ಅವರನ್ನು ಅಧಿಕಾರದಿಂದ ಇಳಿಸಲು ಕೆಳಗಿಳಿಸಲು ಯೋಚಿಸಿದರೆ ಪ್ರಖರ ಹೋರಾಟ ನಡೆಸಬೇಕಾಗುತ್ತದೆ. ಹಿರಿಯರಾಗಿದ್ದರೂ 18 ವರ್ಷದ ಯುವಕನಂತೆ ಯಡಿಯೂರಪ್ಪ ಕ್ರೀಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು. ಇದನ್ನೂ ಓದಿ: ನಾಯಕತ್ವ ಬದಲಾವಣೆಗೆ ದೆಹಲಿಯಲ್ಲಿ ಬೆಲ್ಲದ್ ರಣತಂತ್ರ- ಅರುಣ್ ಸಿಂಗ್ ಮುಂದೆ ಬೆಲ್ಲದ್ ಹೇಳಿದ್ದೇನು?
ಪಕ್ಷದಲ್ಲಿ ಯಡಿಯೂರಪ್ಪ ಪರ ವಿರೋಧ ಚಟುವಟಿಕೆ ನಡೆದಿವೆ.ಅವರು ಎಲ್ಲ ನಾಯಕರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಮನೋಭಾವ ಹೊಂದಿದ್ದಾರೆ ಎಂದಿದ್ದಾರೆ.
ರಾಜ್ಯದಲ್ಲಿ ಕೊರೊನಾ ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ಬಾಕಿ ಉಳಿದ ಎರಡು ವರ್ಷ ಅವಧಿ ಪೂರ್ಣಗೊಳಿಸಲು ಬಿಡಬೇಕು. ಒಂದು ವೇಳೆ ಏನಾದರೂ ಅವರನ್ನು ಕೆಳಗಿಳಿಸುವ ಪ್ರಯತ್ನ ನಡೆದರೆ ಪರಿಸ್ಥಿತಿ ನೆಟ್ಟಗಿರಲ್ಲ. ಇಂತಹ ಪರಿಸ್ಥಿತಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದವರು ತರಬಾರದು ಎಂದು ಸಾರಂಗಧರ ಶ್ರೀಗಳು ಎಚ್ಚರಿಕೆ ನೀಡಿದ್ದಾರೆ.