– ಕಾರ್ ಮೇಲೆತ್ತಿದ್ದಾಗ ಬದುಕಿದ್ದ ಮೂವರು ಆಸ್ಪತ್ರೆಗೆ ಶಿಫ್ಟ್
ಭೋಪಾಲ್: ಮದುವೆಗೆ ಹೊರಟಿದ್ದ ಕಾರ್ ರಸ್ತೆ ಬದಿಯ ಬಾವಿಯೊಳಗೆ ಬಿದ್ದ ಪರಿಣಾಮ ಆರು ಜನ ಸಾವನ್ನಪ್ಪಿದ್ದಾರೆ. ಈ ಘಟನೆ ಮಧ್ಯಪ್ರದೇಶದ ಛತರ್ಪುರ ಜಿಲ್ಲೆಯ ಮಹಾರಾಜಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಉತ್ತರ ಪ್ರದೇಶದ ಮಹೋಬಾದ ಸ್ವಸಾ ಗ್ರಾಮದ ಒಂಬತ್ತು ಜನರು ಮಹಾರಾಜಪುರ ಬಳಿಯ ಪುರವಾದ ಮದುವೆಯಲ್ಲಿ ಭಾಗಿಯಾಗಲು ತೆರಳುತ್ತಿದ್ದರು. ಮಂಗಳವಾರ ಸಂಜೆ ವೇಳೆ ಮಂಜು ಹೆಚ್ಚಾದ ಹಿನ್ನೆಲೆ ಚಾಲಕನಿಗೆ ರಸ್ತೆ ಕಾಣಿಸಿಲ್ಲ. ಪರಿಣಾಮ ರಸ್ತೆಯ ಪಕ್ಕದಲ್ಲಿಯೇ ಇದ್ದ ಬಾವಿಗೆ ವಾಹನ ಇಳಿದಿದೆ. ಪ್ರಯಾಣಿಕರು ಕಿರುಚಾಟ ಕೇಳುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಸಹಾಯಕ್ಕೆ ಮುಂದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೆಲವೇ ಸಮಯದಲ್ಲಿ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಗ್ರಾಮದ ಕ್ರೇನ್ ಬಳಸಿ ಕಾರ್ ಮೇಲೆಕ್ಕೆತ್ತಿದ್ದಾರೆ. ಕಾರ್ ನಲ್ಲಿದ್ದ 9 ಜನರ ಪೈಕಿ 6 ಮಂದಿಯ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಮೂವರ ಸ್ಥಿತಿ ಗಂಭೀರವಾಗಿತ್ತು. ಮೂವರನ್ನ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.