ಆನೇಕಲ್: ಚೀನಾದ ಮಹಾಮಾರಿ ವೈರಸ್ ರಾಜ್ಯಕ್ಕೆ ಎಂಟ್ರಿ ಕೊಟ್ಟ ಬಳಿಕ ಆಸ್ಪತ್ರೆ ಹಾಗೂ ಕ್ವಾರಂಟೈನ್ ಸೆಂಟರ್ ಗಳ ಒಂದೊಂದೇ ಭಯಾನಕ ದೃಶ್ಯಗಳು ಹೊರಬರುತ್ತಿವೆ. ಇದೀಗ ಅದೇ ರೀತಿ ಆನೇಕಲ್ ಕ್ವಾರಂಟೈನ್ ಸೆಂಟರಿನ ಅವ್ಯವಸ್ಥೆಯು ಕೂಡ ಬಯಲಾಗಿದೆ.
ಆನೇಕಲ್ ಕಿತ್ತೂರು ರಾಣಿ ಚೆನ್ನಮ್ಮ ಹಾಸ್ಟೆಲ್ನಲ್ಲಿ ಕೊರೊನಾ ಸೋಂಕಿತರನ್ನು ಕ್ವಾರಂಟೈನ್ ಮಾಡಲಾಗಿದೆ. ಈ ಸರ್ಕಾರಿ ಕ್ವಾರಂಟೈನ್ ಕೇಂದ್ರದಲ್ಲಿ ಸದ್ಯ 35 ಜನ ಇದ್ದು, ಇದೀಗ ಅಲ್ಲಿನ ಕ್ವಾರಂಟೈನಿಗಳು ಪಬ್ಲಿಕ್ ಟಿವಿಗೆ ಕರೆಮಾಡಿ ತಮ್ಮ ಕಷ್ಟ ತೋಡಿಕೊಂಡಿದ್ದಾರೆ.
ಕ್ವಾರಂಟೈನ್ನಲ್ಲಿದ್ದ 20ಕ್ಕೂ ಹೆಚ್ಚು ಜನರಿಗೆ ಸೋಂಕು ದೃಢವಾಗಿದೆ. ಸ್ವಚ್ಛತೆ ಇಲ್ಲ, ಕ್ವಾರಂಟೈನ್ನಲ್ಲಿರೋರಿಗೆ ಪಾಸಿಟಿವ್ ಬಂದ್ರೂ ಸ್ಯಾನಿಟೈಸ್ ಇಲ್ಲ. ಪಾಸಿಟಿವ್ ಬಂದ ಕೆಲವರವನ್ನು ಕರೆದುಕೊಂಡು ಹೋಗಿದ್ದಾರೆ. ಆದರೆ ಅವರು ಹೋದ ನಂತರ ಬೇಡ್ ಗಳನ್ನು ಕ್ಲೀನ್ ಮಾಡಲ್ಲ. ಬಾತ್ ರೂಂ ನ ಒಳಗಡೆ ಹೋಗೋದಕ್ಕು ಕಷ್ಟವಾಗತ್ತೆ ಎಂಬ ಆರೋಪ ಕೇಳಿಬಂದಿದೆ. ಯಾರೂ ಇಲ್ಲಿ ನಮ್ಮನ್ನು ಕೇರ್ ಮಾಡಲ್ಲ. ನಾವೇನು ಇಲ್ಲಿಗೆ ಗತಿಗೆಟ್ಟು ಬಂದಿದ್ದೀವಾ ಅಂತ ಅಳಲನ್ನು ತೋಡಿಕೊಂಡಿದ್ದಾರೆ.
ಬಾತ್ ರೂಂ ಒಳಗಡೆ ಹೋಗೋದಕ್ಕೆ ಕೂಡ ಕಷ್ಟವಾಗತ್ತೆ. ಈ ಬಗ್ಗೆ ಸಿಬ್ಬಂದಿಯನ್ನು ಪ್ರಶ್ನಿಸಿದ್ರೆ ನಮ್ಮ ಕೆಲಸವಲ್ಲ ಅಂತ ಹೇಳುತ್ತಾರೆ. ತಾಲೂಕು ದಂಡಾಧಿಕಾರಿಗಳು ನಾಪತ್ತೆಯಾಗಿದ್ದಾರೆ. ಜೊತೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಸಹ ಯಾರೂ ಇಲ್ಲ ಎಂದು ಸೋಂಕಿತರ ಸಂಪರ್ಕ ದಲ್ಲಿ ಇದ್ದವರು ಪಬ್ಲಿಕ್ ಟಿವಿಗೆ ಕರೆಮಾಡಿ ತಮ್ಮ ಕಷ್ಟವನ್ನು ಹಂಚಿಕೊಂಡಿದ್ದಾರೆ.
ಒಟ್ಟಿನಲ್ಲಿ ಹಾಸ್ಟೆಲ್ ಸಿಬ್ಬಂದಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ಜಗಳಕ್ಕೆ ಸೋಂಕಿತ ರೋಗಿಗಳ ಸಂಬಂಧಿಕರು ಪರದಾಟ ಅನುಭವಿಸುವಂತಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ವ್ಯವಸ್ಥೆ ಸರಿಪಡಿಸಬೇಕಾಗಿ ಕ್ವಾರಂಟೈನಿಗಳು ಆಗ್ರಹಿಸಿದ್ದಾರೆ.