ಮೈಸೂರು: ಏನೇ ಅಸಮಾಧಾನಗಳಿದ್ದರೂ ಪಕ್ಷದ ವೇದಿಕೆಯಲ್ಲಿರಬೇಕು. ಬಹಿರಂಗವಾಗಿ ಬೇಡ ಅಂತರಂಗದಲ್ಲಿ ಇರಲಿ ಎಂದು ಶಾಸಕ ರಾಮದಾಸ್ ಮತ್ತು ಸಂಸದ ಪ್ರತಾಪ್ ಸಿಂಹ್ ಅವರಿಗೆ ಮಾಜಿ ಸಚಿವ ಹೆಚ್.ವಿಶ್ವನಾಥ್ ಸಲಹೆ ನೀಡಿದ್ದಾರೆ. ಪಕ್ಷದಲ್ಲಿ ರಾಮದಾಸ್ ಹಿರಿಯರು. ಜಿಲ್ಲಾ ಮಂತ್ರಿಗಳು, ಹಿರಿಯರು ಇದ್ದಾರೆ. ಎಲ್ಲರ ಬಳಿ ಚರ್ಚಿಸಿ ಸಮದ್ಯೆ ಬಗೆಹರಿಸಿಕೊಳ್ಳಿ. ಅದರ ಬದಲಾಗಿ ಬಹಿರಂಗವಾಗಿ ವಾಕ್ಸಮರ ಬೇಡ ಎಂದು ಹೇಳಿದರು.
ಹುಣಸೂರು ಪ್ರತ್ಯೇಕ ಜಿಲ್ಲೆ ಮಾಡುವ ಬಗ್ಗೆ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಜಿಲ್ಲೆ ಮಾಡಲು ನಿಮಗೇನು ಅಧಿಕಾರ ಇದೆ ಅಂತ ಮಾಜಿ ಸಚಿವ ಸಾ.ರಾ.ಮಹೇಶ್ ಕೇಳುತ್ತಾರೆ. ಚುನಾವಣೆಯಲ್ಲಿ ಗೆದ್ದರೆ ಮಾತ್ರ ಮಾತನಾಡಬೇಕಾ? ನಾನು ಪ್ರಜ್ಞಾವಂತ ಭಾರತೀಯ ಪ್ರಜೆ. ಹಾಗಾಗಿ ಕೇಳ್ತಾ ಇದ್ದೇನೆ. ನೀವ್ಯಾರು ಅಂತ ಪ್ರಶ್ನೆ ಮಾಡೋದು ಸರಿಯಲ್ಲ. ಹುಣಸೂರು ಪ್ರತ್ಯೇಕ ಜಿಲ್ಲೆಯ ವಿಚಾರವಾಗಿ ಸಭೆ ನಡೆಸಿ ಹೋರಾಟ ಮಾಡುತ್ತೇವೆ. ಮಾಜಿ ಸಚಿವರು, ಶಾಸಕರಾಗಿ ಸಾ.ರಾ.ಮಹೇಶ್ ಹೀಗೆ ಮಾತನಾಡಬಾರದು ಎಂದು ಹೆಚ್.ವಿಶ್ವನಾಥ್ ಬೇಸರ ಹೊರಹಾಕಿದರು.
ಕೋವಿಡ್ ಸಮಸ್ಯೆ ಬಗೆಹರಿದ ಬಳಿಕ ಹುಣಸೂರು ಜಿಲ್ಲೆ ಮಾಡುವ ಕುರಿತು ಸಭೆ ನಡೆಸಲಾಗುವುದು. ಎಲ್ಲಾ ಅಭಿಮಾನಿಗಳು, ಸಂಘ ಸಂಸ್ಥೆಗಳು ಎಲ್ಲ ಜೊತೆ ಚರ್ಚೆ ಮಾಡಿ ಹೋರಾಟ ರೂಪಿಸುತ್ತಿದ್ದೇವೆ. ಸಿಎಂ ಜಿಲ್ಲೆಯ ಮಾಡುವ ಕುರಿತು ಭರವಸೆ ನೀಡಿದ್ರೆ ಹೋರಾಟದ ಪ್ರಶ್ನೆಯೇ ಬರಲ್ಲ. ಬಳ್ಳಾರಿಯವರು ತಮ್ಮ ಅವಶ್ಯಕತೆಗಳಿಗೆ ತಕ್ಕಂತೆ ಹೊಸ ಜಿಲ್ಲೆ ಕೇಳುತ್ತಿದ್ದಾರೆ. ನಾವು ನಮ್ಮ ಅವಶ್ಯಕತೆಗಾಗಿ ಕೇಳುತ್ತಿದ್ದೇವೆ ಎಂದರು.