ಬಳ್ಳಾರಿ: ಗಣಿ ನಾಡಿನಲ್ಲಿ ಗರ್ಭಿಣಿಯರಿಗೆ ಆತಂಕ ಹೆಚ್ಚಾಗಿದ್ದು, ಕೊರೊನಾ ಎರಡನೇ ಅಲೆಯಲ್ಲಿ 180ಕ್ಕೂ ಹೆಚ್ಚು ಗರ್ಭಿಣಿಯರಿಗೆ ಸೋಂಕು ದೃಢಪಟ್ಟಿದ್ದು, 7 ಜನ ಸಾವನ್ನಪ್ಪಿದ್ದಾರೆ. ಹೀಗಾಗಿ ಜಿಲ್ಲೆಯ ಜನತೆ ಬೆಚ್ಚಿ ಬಿದ್ದಿದ್ದಾರೆ.
ಒಟ್ಟು 180 ಗರ್ಭಿಣಿಯರಿಗೆ ಸೋಂಕು ತಗುಲಿದ್ದು, ಈವರೆಗೆ 7 ಸೋಂಕಿತ ಗರ್ಭಿಣಿಯರನ್ನು ಮಹಾಮಾರಿ ಬಲಿ ಪಡೆದಿದೆ. ಅಲ್ಲದೆ ನಾಲ್ಕು ಸೋಂಕಿತ ಗರ್ಭಿಣಿಯರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಮಗು ಬದುಕಿಲ್ಲ. ಇದರ ಜೊತೆಗೆ ಕಳೆದ ಹತ್ತು ದಿನಗಳಲ್ಲಿ 7 ಸೋಂಕಿತ ಗರ್ಭಿಣಿಯರ ಗರ್ಭದಲ್ಲೆ ಕಂದಮ್ಮಗಳು ಸಾವಿಗೀಡಾಗಿವೆ. ಹೀಗಾಗಿ ಜಿಲ್ಲೆಯ ಗರ್ಭಿಣಿಯರಲ್ಲಿ ಭಯ ಕಾಡುತ್ತಿದೆ.
ಜಿಲ್ಲೆಯಲ್ಲಿ ಈ ವರೆಗೆ ಎರಡನೇ ಅಲೆಯಲ್ಲಿ 180 ಸೋಂಕಿತ ಗರ್ಭಿಣಿಯರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, 134 ಗರ್ಭಿಣಿಯರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಹೆರಿಗೆ ಸಮಯದಲ್ಲಿ ಯಾವುದೇ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಕೋವಿಡ್ ಟೆಸ್ಟ್ ಮಾಡಿಸಿದಾಗ ಸೋಂಕು ಪತ್ತೆಯಾಗಿದೆ. ಹೀಗಾಗಿ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ಗರ್ಭಿಣಿಯರಿಗೆ ಕೋವಿಡ್ ಟೆಸ್ಟ್ ಕಡ್ಡಾಯವಾಗಿ ಮಾಡುವುದರಿಂದ ಮುಂದೆ ಆಗುವ ಅನಾಹುತ ತಪ್ಪಿಸಿಬಹುದಾಗಿದೆ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.