ಮೈಸೂರು: ಸರಿಸುಮಾರು 6 ತಿಂಗಳ ಹಿಂದೆ ಮಲೇಷ್ಯಾದಲ್ಲಿ ಮೃತಪಟ್ಟ ಯುವಕನ ಮೃತದೇಹ ಇದೀಗ ಹುಟ್ಟೂರಿಗೆ ಬಂದಿದೆ.
ಹೌದು. ಪಿರಿಯಾಪಟ್ಟಣದ ನಿವಾಸಿ ಸುಮಂತ್(22) ಮಲೇಷ್ಯಾದಲ್ಲಿ ಡಿಸೆಂಬರ್ ತಿಂಗಳಲ್ಲಿ ನಿಗೂಢವಾಗಿ ಮೃತಪಟ್ಟಿದ್ದನು. ಇದೀಗ ಆತನ ಮೃತದೇಹ ಆರು ತಿಂಗಳ ನಂತರ ತವರೂರಿಗೆ ಬಂದಿದ್ದು, ಕೊನೆಗೂ ಮಗನ ಅಂತ್ಯಕ್ರಿಯೆ ನೆರವೇರಿಸಿ ತಾಯಿ ಸಮಾಧಾನಪಟ್ಟುಕೊಂಡಿದ್ದಾರೆ.
ಸುಮಂತ್ ಕೆಲಸಕ್ಕಾಗಿ ಮಲೇಷ್ಯಾಕ್ಕೆ ತೆರಳಿದ್ದನು. 35 ಸಾವಿರ ರೂ. ಸಂಬಳ ಕೊಡಿಸುವುದಾಗಿ ನಂಬಿಸಿ ಮಧ್ಯವರ್ತಿಯೊಬ್ಬ ಕರೆದೊಯ್ದಿದ್ದನು. ಆದರೆ ಆ ಬಳಿಕ ಕೇವಲ 18 ಸಾವಿರ ರೂ. ಕೆಲಸ ಕೊಡಿಸಿ ಮಧ್ಯವರ್ತಿ ವಂಚನೆ ಮಾಡಿದ್ದನು. ಇದರಿಂದ ಮನನೊಂದಿದ್ದ ಸುಮಂತ್, ವಾಪಸ್ ಬರುವುದಾಗಿ ತಾಯಿ ಬಳಿ ಹೇಳಿಕೊಂಡಿದ್ದ. ಅಷ್ಟರಲ್ಲೇ ಸುಮಂತ್ ಮೃತಪಟ್ಟಿರುವುದಾಗಿ ಆತನ ಸಹೋದ್ಯೋಗಿಗಳು ತಿಳಿಸಿದ್ದ.
ಇತ್ತ ಮಗನ ಸಾವಿನ ಸುದ್ದಿ ಕೇಳುತ್ತಿದ್ದಂತೆಯೇ ಸುಮಂತ್ ಪೋಷಕರು ಸಾವಿನ ತನಿಖೆ ಹಾಗೂ ಶವ ತರಿಸಿಕೊಳ್ಳಲು ಸಂಸದ ಪ್ರತಾಪ್ಸಿಂಹಗೆ ಮನವಿ ಮಾಡಿದ್ದರು. ಅಂತೆಯೇ ಸಂಸದರು ಭಾರತದ ರಾಯಭಾರಿ ಕಚೇರಿಗೆ ಮಾಹಿತಿ ಕೂಡ ನೀಡಿದ್ದರು. ಆದರೆ ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಸುಮಂತ್ ಮೃತದೇಹ ಆರು ತಿಂಗಳ ಬಳಿಕ ತಡವಾಗಿ ಆಗಮಿಸಿದೆ.