– ಶನಿವಾರ ಬೆಳಗ್ಗೆ 10ರವರೆಗೆ 144 ಸೆಕ್ಷನ್
ಶಿವಮೊಗ್ಗ: ನಗರದಲ್ಲಿ ಬಜರಂಗದಳದ ಕಾರ್ಯಕರ್ತ ನಾಗೇಶ್ ಮೇಲೆ ಇಂದು ಬೆಳಗ್ಗೆ ದುಷ್ಕರ್ಮಿಗಳ ಗುಂಪೊಂದು ಹಲ್ಲೆ ನಡೆಸಿದೆ. ಶಿವಮೊಗ್ಗ ನಗರದ ಲಷ್ಕರ್ ಮೊಹಲ್ಲಾ ಬಳಿ ಬಜರಂಗದಳ ಕಾರ್ಯಕರ್ತ ನಾಗೇಶ್ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ನಾಗೇಶ್ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಳಗ್ಗೆ ನೆಹರೂ ಕ್ರೀಡಾಂಗಣದಲ್ಲಿ ವಾಕಿಂಗ್ ಮುಗಿಸಿಕೊಂಡು ವಾಪಾಸ್ ಹೋಗುತ್ತಿದ್ದ ವೇಳೆ ಐದಾರೂ ಜನರು ಇದ್ದ ದುಷ್ಕರ್ಮಿಗಳ ತಂಡ ಹಲ್ಲೆ ಮಾಡಿ ಪರಾರಿಯಾಗಿದೆ. ಘಟನೆ ನಂತರ ನಗರದಲ್ಲಿ ಐದಾರೂ ಕಡೆಗಳಲ್ಲಿ ಅಹಿತಕರ ಘಟನೆಗಳು ನಡೆದಿವೆ. ಐದಾರು ಕಾರುಗಳು, 2 ಆಟೋ, 2 ಬೈಕ್, ತರಕಾರಿ ಗಾಡಿಯನ್ನು ಜಖಂ ಗೊಳಿಸಲಾಗಿದೆ. 10ಕ್ಕಿಂತ ಹೆಚ್ಚು ಜನರಿಗೆ ಗಾಯಗಳಾಗಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಶಿವಮೊಗ್ಗ ನಗರದಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ.
ಗಾಂಧಿ ಬಜಾರ್, ಮೀನು ಮಾರುಕಟ್ಟೆ, ಚೋರ್ ಬಜಾರ್, ರವಿ ವರ್ಮ ಬೀದಿ, ಕಸ್ತೂರಾ ಬಾ ರಸ್ತೆಗಳಲ್ಲಿ ಕಿಡಿಗೇಡಿಗಳು ದುಷ್ಕøತ್ಯ ನಡೆಸಿದ್ದಾರೆ. ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ನಡೆಸಿದ್ದಾರೆ. ಗಾಯಗೊಂಡಿರುವ ಸುಮಾರು 10 ಕ್ಕಿಂತ ಹೆಚ್ಚು ಜನ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಂಧಿ ಬಜಾರ್ ಸುತ್ತಮುತ್ತ ನಿಲ್ಲಿಸಿದ್ದ, ಸುಮಾರು ಐದಕ್ಕೂ ಹೆಚ್ಚು ಕಾರುಗಳು ಜಖಂ ಗೊಳಿಸಲಾಗಿದೆ.
ಘಟನೆ ಹಿನ್ನೆಲೆಯಲ್ಲಿ ಪೂರ್ವ ವಲಯದ ಐಜಿಪಿ ರವಿ ಅವರು ಶಿವಮೊಗ್ಗಕ್ಕೆ ಭೇಟಿ ನೀಡಿದ್ದು, ಶಿವಮೊಗ್ಗ ಎಸ್.ಪಿ.ಶಾಂತರಾಜು ಜೊತೆ ಪರಿಸ್ಥಿತಿ ಕುರಿತು ಚರ್ಚೆ ನಡೆಸಿದರು. ಇದೇ ವೇಳೆ ಮಾತನಾಡಿದ ಅವರು ಶಿವಮೊಗ್ಗದಲ್ಲಿ ಬೆಳಗ್ಗೆಯಿಂದ ಐದಾರು ಅಹಿತಕರ ಘಟನೆಗಳು ನಡೆದಿವೆ. ಹಿಂದೂ, ಮುಸ್ಲಿಂ ಉಭಯ ಸಮುದಾಯದ ನಡುವೆ ಸಾಮರಸ್ಯದ ವಿಷಯ ಇದೆ. ಪರಿಶೀಲನೆ ನಡೆಸುತ್ತಿದ್ದೇನೆ. ಸಾರ್ವಜನಿಕರು ಸಹಕಾರ ನೀಡಬೇಕು. ಯಾರು ಕೂಡ ಹತಾಶರಾಗುವುದು ಬೇಡ. ಪೊಲೀಸ್ ಇಲಾಖೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ವದಂತಿಗಳಿಗೆ ಕಿವಿಗೂಡಬೇಡಿ, ಪರಿಸ್ಥಿತಿ ಶಾಂತವಾಗಿದೆ ಎಂದು ಹೇಳಿದ್ದಾರೆ.
ಸದ್ಯಕ್ಕೆ ಶಿವಮೊಗ್ಗ ನಗರದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ನಾಳೆಯವರೆಗೂ ಮೂರು ಠಾಣಾ ವ್ಯಾಪ್ತಿ (ದೊಡ್ಡಪೇಟೆ, ತುಂಗಾನಗರ ಹಾಗೂ ಕೋಟೆ)ಯಲ್ಲಿ ಕರ್ಪ್ಯೂ ವಿಧಿಸಿದ್ದು, ಮೂರು ದಿನ ಸೆಕ್ಷನ್ 144 ಜಾರಿಯಲ್ಲಿರುವಂತೆ ಆದೇಶಿಸಿದ್ದಾರೆ.