ಚಾಮರಾಜನಗರ: ಮದ್ದೂರು ವಲಯದ ಹೊಂಗಳ್ಳಿ ಗಸ್ತಿನಲ್ಲಿ ಗಂಡು ಹುಲಿ ಕಳೆಬರ ಪತ್ತೆಯಾಗಿದ್ದು, ಮೇಲ್ನೋಟಕ್ಕೆ ಹುಲಿಯು ಸ್ವಾಭಾವಿಕವಾಗಿ ಸಾವನ್ನಪ್ಪಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದ ಹೊಂಗಳ್ಳಿ ಗಸ್ತಿನಲ್ಲಿ ಗಂಡು ಹುಲಿ ಕಳೆಬರ ಪತ್ತೆಯಾಗಿದೆ. ಮೃತ ಹುಲಿಯು 10 ರಿಂದ 11ವರ್ಷ ವಯಸ್ಸಿನದ್ದು ಎಂದು ಅಂದಾಜಿಸಲಾಗಿದ್ದು, ವ್ಯಾಘ್ರನ ಎಲ್ಲಾ ಉಗುರು, ಹಲ್ಲುಗಳು ಹಾಗೂ ಇತರೆ ಅಂಗಾಂಗ ಸುರಕ್ಷಿತವಾಗಿವೆ.
ಹುಲಿಯ ಕೆಲ ಹಲ್ಲುಗಳು ಸವೆದು ಹಾಳಾಗಿದ್ದು, ಮೇಲ್ನೋಟಕ್ಕೆ ಇದು ಸ್ವಾಭಾವಿಕ ಸಾವು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಬಂಡೀಪುರ ಹುಲಿ ಯೋಜನೆಯ ಪಶು ವೈದ್ಯ ಡಾ.ವಾಸೀಂ ಮಿರ್ಜಾ ಅವರು ಮೃತ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಹುಲಿಯ ದೇಹವನ್ನು ಸುಡಲಾಗಿದೆ.