ಚಾಮರಾಜನಗರ: ಎರಡು ಹುಲಿಗಳ ನಡುವೆ ನಡೆದ ಕಾದಾಟದಲ್ಲಿ ಗಂಡು ಹುಲಿಯೊಂದು ಸಾವನ್ನಪ್ಪಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯ ವ್ಯಾಪ್ತಿಯಲ್ಲಿ ನಡೆದಿದೆ.
ಸರಹದ್ದಿನ ಕದನದಲ್ಲಿ ಹುಲಿಯೊಂದು ಮೃತಪಟ್ಟಿರುವ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಎಲಚೆಟ್ಟಿ ಗಸ್ತಿನ ಆಲದಮರದ ಹಳ್ಳದಲ್ಲಿ ನಡೆದಿದೆ. ಅಂದಾಜು 4 ರಿಂದ 5 ವರ್ಷದ ಗಂಡು ಹುಲಿ ಮೃತಪಟ್ಟಿದ್ದು, ಹುಲಿಗಳ ನಡುವಿನ ಸರಹದ್ದಿನ ಕಾದಾಟದಲ್ಲಿ ಸತ್ತಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಮೃತ ಹುಲಿ ಮೈಮೇಲೆ ತೀವ್ರತರ ಗಾಯಗಳಾಗಿದ್ದು, ಉಗುರು, ಹಲ್ಲುಗಳು, ಅಂಗಾಂಗಗಳು ಸುರಕ್ಷಿತವಾಗಿವೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಎನ್ಟಿಸಿಎ ಪ್ರತಿನಿಧಿ, ಪಶು ವೈದ್ಯರ ಸಮ್ಮುಖದಲ್ಲಿ ಹುಲಿಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಸುಡಲಾಗಿದೆ.