– ಈ ಸರ್ಕಾರ ಹೋದ್ಮೇಲೆ ಮತ್ತೆ ಬರ್ತಿವಿ
ಬೆಂಗಳೂರು: ಕೊರೊನಾ ಆತಂಕ ಮತ್ತು ನಿರುದ್ಯೋಗದಿಂದಾಗಿ ಸಿಲಿಕಾನ್ ಸಿಟಿಯಲ್ಲಿ ವಾಸವಾಗಿದ್ದ ಜನರು ತಮ್ಮ ಸ್ವಂತ ಊರುಗಳತ್ತ ಪಯಣ ಬೆಳೆಸಿದ್ದಾರೆ. ಶುಕ್ರವಾರದಿಂದ ಜನರು ಊರುಗಳತ್ತ ಗಂಟು ಮೂಟೆ ಕಟ್ಟಿಕೊಂಡು ಪ್ರಯಾಣ ಬೆಳೆಸುತ್ತಿದ್ದಾರೆ.
ಬೆಂಗಳೂರು ಹೊರವಲಯದ ನೆಲಮಂಗಲ ಟೋಲ್ಗೇಟ್ ಬಳಿ ಇಂದು ಸಹ ಮನೆಯ ಸಾಮಾನುಗಳನ್ನು ವಾಹನಗಳಲ್ಲಿ ತುಂಬಿಕೊಂಡು ಹೋಗುತ್ತಿರುವ ದೃಶ್ಯಗಳು ಕಂಡು ಬಂದವು. ಈ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ವ್ಯಕ್ತಿ, ಕೆಲಸ ಮಾಡುತ್ತಿದ್ದ ಫ್ಯಾಕ್ಟರಿ ಮುಚ್ಚಿದ್ದರಿಂದ ಕೆಲಸವೂ ಇಲ್ಲ. ಬಾಡಿಗೆ ಕಟ್ಟಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಮನೆ ಖಾಲಿ ಮಾಡಿಕೊಂಡು ಸ್ವಂತ ಊರಿನತ್ತ ಹೊರಟ್ಟಿದ್ದೇವೆ. ಈ ಸರ್ಕಾರ ಹೋದ್ಮೇಲೆ ಮತ್ತೆ ಬೆಂಗಳೂರಿಗೆ ಬರುತ್ತೇವೆ ಎಂದು ಹೇಳಿದರು.
ಶುಕ್ರವಾರ ಈ ಮಹಾ ವಲಸೆ ಆರಂಭವಾಗಿದ್ದು, ಜನರು ಸಿಕ್ಕ ಸಿಕ್ಕ ವಾಹನಗಳಲ್ಲಿ ಊರು ಸೇರಿಕೊಳ್ಳುತ್ತಿದ್ದಾರೆ. ಈ ಮಹಾ ವಲಸೆಯಿಂದ ಗ್ರಾಮೀಣ ಭಾಗಗಳಲ್ಲಿಯೂ ಕೊರೊನಾ ಹಬ್ಬುವ ಆತಂಕ ಮನೆ ಮಾಡಿದೆ.