– 5 ತಿಂಗಳ ಹಿಂದೆಯಷ್ಟೆ ವರ್ಗಾವಣೆಯಾಗಿ ಬಂದಿದ್ರು
ಭುವನೇಶ್ವರ: ಐಪಿಎಲ್ ಪಂದ್ಯವನ್ನು ವೀಕ್ಷಿಸುತ್ತಿದ್ದಾಗ ಮೂರು ಅಂತಸ್ತಿನ ಕಟ್ಟಡದ ಮೇಲ್ಛಾವಣಿಯಿಂದ ಬಿದ್ದು ಯೋಧ ಮೃತಪಟ್ಟಿರುವ ಘಟನೆ ಒಡಿಶಾದ ರಾಯಗಡ ಜಿಲ್ಲೆಯಲ್ಲಿ ನಡೆದಿದೆ.
ಮಂಗಳವಾರ ಈ ಘಟನೆ ನಡೆದಿದ್ದು, ಮೃತ ಯೋಧನನ್ನು ನವರಂಗ್ಪುರದ ಯೋಗೇಶ್ವರ್ ದಾಸ್ (27) ಎಂದು ಗುರುತಿಸಲಾಗಿದೆ. ದಾಸ್ ಮಂಗಳವಾರ ಸಂಜೆ ಮನೆಯ ಮೇಲ್ಛಾವಣಿಯ ಮೇಲೆ ಕುಳಿತುಕೊಂಡು ತಮ್ಮ ಮೊಬೈಲ್ ಫೋನಿನಲ್ಲಿ ಐಪಿಎಲ್ ಮ್ಯಾಚ್ ನೋಡುತ್ತಿದ್ದರು. ಆದರೆ ದುರದೃಷ್ಟವಶಾತ್ ಆಕಸ್ಮಿಕವಾಗಿ ದಾಸ್ ಛಾವಣಿಯಿಂದ ಕೆಳಗೆ ಬಿದ್ದಿದ್ದಾರೆ.
ಪರಿಣಾಮ ಅವರ ತಲೆಗೆ ಗಂಭೀರ ಗಾಯಗಳಾಗಿದೆ. ತಕ್ಷಣ ದಾಸ್ರನ್ನು ಸಹೋದ್ಯೋಗಿಗಳು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ. ಆದರೆ ತೀವ್ರವಾಗಿ ರಕ್ತಸ್ರಾವವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ದಾಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಮೃತ ಯೋಗೇಶ್ವರ್ ದಾಸ್ 2013ರಲ್ಲಿ ಕೊರಪುಟ್ನ ಒಡಿಶಾ ವಿಶೇಷ ಸಶಸ್ತ್ರ ಪೊಲೀಸ್ (ಒಎಸ್ಎಪಿ) 3ನೇ ಬೆಟಾಲಿಯನ್ಗೆ ಸೇರಿದ್ದರು. ಐದು ತಿಂಗಳ ಹಿಂದೆ ರಾಯಗಡಕ್ಕೆ ವರ್ಗಾವಣೆಯಾಗಿ ಬಂದಿದ್ದರು. ಆದರೆ ಮ್ಯಾಚ್ ನೋಡುತ್ತಿದ್ದಾಗ ಛಾವಣಿ ಮೇಲಿನಿಂದ ಬಿದ್ದು ಮೃತಪಟ್ಟಿದ್ದಾರೆ.