ಬೆಂಗಳೂರು: ನಗರದ ಫೈನಾನ್ಶಿಯರ್ ಅಪಹರಣ ಪ್ರಕರಣದಲ್ಲಿ ಸುನಾಮಿ ಕಿಟ್ಟಿ ಹೆಸರು ಕೇಳಿ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಂದಿಯನ್ನು ನಾಗಮಂಗಲ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಮಹೇಶ್, ಮೋಹನ್, ನವ್ಯಂತ್, ಭರತ್, ಜೋಸೆಫ್, ರವಿಕಿರಣ್, ರಾಜು ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳು ಹಾಗೂ ಫೈನಾನ್ಶಿಯರ್ ನವೀನ್ ನಡುವೆ ಹಣಕಾಸಿನ ವಿಚಾರಕ್ಕೆ ಜಗಳ ನಡೆದಿತ್ತು ಎಂಬ ಮಾಹಿತಿ ಲಭಿಸಿತ್ತು. ಇದೇ ವಿಚಾರವಾಗಿ ಆರೋಪಿಗಳು ಗುರುವಾರ ಆತನನ್ನು ಕಿಡ್ನಾಪ್ ಮಾಡಿ ನಾಗಮಂಗಲದ ವಸತಿ ಗೃಹವೊಂದರಲ್ಲಿ ಬಂಧಿಸಿದ್ದರು ಎನ್ನಲಾಗಿದೆ. ಆದರೆ ಅವರಿಂದ ತಪ್ಪಿಸಿಕೊಂಡಿರುವ ನವೀನ್ ಪೋಷಕರಿಗೆ ಫೋನ್ ಮೂಲಕ ಮಾಹಿತಿ ನೀಡಿದ್ದ.
ಮಗನ ಅಪಹರಣದ ಮಾಹಿತಿ ಪಡೆದ ಪೋಷಕರು ತಿಲಕ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ತಿಲಕ್ ನಗರ ಪೊಲೀಸರು ನಾಗಮಂಗಲದ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ವಸತಿ ಗೃಹದ ಮೇಲೆ ದಾಳಿ ಮಾಡಿ 7 ಮಂದಿಯನ್ನು ಬಂಧಿಸಿದ್ದಾರೆ.
ಪ್ರಕರಣದಲ್ಲಿ ಬಿಗ್ಬಾಸ್ ಖ್ಯಾತಿಯ ಸುನಾಮಿ ಕಿಟ್ಟಿ ಹೆಸರು ಕೇಳಿ ಬಂದಿದ್ದು, ಆರೋಪಿಗಳು ಅಪಹರಣ ನಡೆಸಿ ಸಂದರ್ಭದಲ್ಲಿ ಕಿಟ್ಟಿ ಕೂಡ ಕಾರಿನಲ್ಲಿದ್ದ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಕಾರುಗಳಿಗೆ ಫೈನಾನ್ಸ್ ಮಾಡುತ್ತಿದ್ದ ನವೀನ್ನೊಂದಿಗೆ ವೈಷಮ್ಯ ಬೆಳೆಸಿದ್ದ ಕೊಂಡಿದ್ದ ಆರೋಪಿಗಳು ಹಲವು ಬಾರಿ ಹಣಕಾಸಿನ ವಿಚಾರಕ್ಕೆ ಜಗಳ ನಡೆಸಿದ್ದರು. ಈ ವಿಚಾರದಲ್ಲಿ ಸುನಾಮಿ ಕಿಟ್ಟಿ ಮಧ್ಯಪ್ರವೇಶ ಮಾಡಿದ್ದ ಎಂಬ ಮಾಹಿತಿ ಲಭಿಸಿದೆ.
ಸದ್ಯ ಸುನಾಮಿ ಕಿಟ್ಟಿ ನಾಪತ್ತೆಯಾಗಿದ್ದು ಪೊಲೀಸರು ಹುಡುಕಾಟ ನಡೆಸಿದ್ದಾರೆ. ಈ ಹಿಂದೆಯೂ ಜಾನ್ಞಭಾರತಿ ಪೊಲೀಸರಿಂದ ಅಪಹರಣ ಪ್ರಕರಣವೊಂದರಲ್ಲಿ ಸುನಾಮಿ ಕಿಟ್ಟಿ ಬಂಧಿತನಾಗಿದ್ದ.