ಬೆಂಗಳೂರು: ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಅವರು ಇಂದು ಡಿ.ಜೆ ಹಳ್ಳಿ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದು, ಈ ವೇಳೆ ಸ್ಟೇಷನ್ ಮುಂದೆ ಮತ್ತೆ ಭಾರೀ ಹೈಡ್ರಾಮ ನಡೆಯಿತು.
ನಮ್ಮ ಮಕ್ಕಳನ್ನು ಹಿಡಿದು ತಂದಿದ್ದಾರೆ. ಅವರೆಲ್ಲ ಯಾವ ತಪ್ಪು ಕೂಡ ಮಾಡಿಲ್ಲ. ಸುಖಾ ಸುಮ್ಮನೆ ಮಕ್ಕಳನ್ನು ಎಳೆದು ತಂದಿದ್ದಾರೆ. ಅವರನ್ನ ಬಿಡಿಸಿಕೊಡಿ ಎಂದು ಪೋಷಕರು ಶಾಸಕರಿಗೆ ಮುತ್ತಿಗೆ ಹಾಕಿದ ಪ್ರಸಂಗ ನಡೆಯಿತು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಖಂಡ, ನಾನೇ ಠಾಣೆಗೆ ಬಂದಿದ್ದೆ. ನಮ್ಮ ಕ್ಷೇತ್ರದ ಅಮಾಯಕರಿಗೆ ತೊಂದರೆ ಆಗಬಾರದು. ಅಪರಾಧಿಗಳಿಗೆ ಶಿಕ್ಷೆಯಾಗಲಿ. ವಿಡಿಯೋಗಳಲ್ಲಿ ಇರೋರಿಗೆ ಶಿಕ್ಷೆಯಾಗಲಿ ಎಂದು ಹೇಳುವ ಮೂಲಕ ಪರೋಕ್ಷವಾಗಿ ಆರೋಪಿಗಳ ಬೆನ್ನಿಗೆ ನಿಂತ್ರಾ ಅನ್ನೋ ಅನುಮಾನ ಮೂಡಿದೆ.
ನಮ್ಮ ಕ್ಷೇತ್ರದಲ್ಲಿ ಅಮಾಯಕರು ಮತ್ತು ಕೂಲಿ ಕಾರ್ಮಿಕರು ಇದ್ದಾರೆ. ನನಗೆ ಯಾವ ಹೈಕಮಾಂಡ್ ಒತ್ತಡವೂ ಇಲ್ಲ. ಘಟನೆಯಲ್ಲಿ ತೊಂದರೆಗೆ ಒಳಗಾಗಿರುವವರಿಗೆ ಪರಿಹಾರ ಕೊಡಲು ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿಕೊಂಡಿದ್ದೇನೆ ಎಂದು ತಿಳಿಸಿದರು.
ಒಟ್ಟಿನಲ್ಲಿ ಬಂಧಿತ ಗಲಭೆಕೊರರಲ್ಲಿ ಅಮಾಯಕರನ್ನ ಬಿಡಲು ಶಾಸಕರು ಠಾಣೆಗೆ ಬಂದು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿ ಹೋಗಿದ್ದಾರೆ. ಅಷ್ಟೇ ಅಲ್ಲ ಶಾಸಕರ ಮಾತಿನಂತೆ ಒಂದಷ್ಟು ಬಂಧಿತ ಗಲಭೆಕೊರರನ್ನ ಬಿಡುಗಡೆ ಮಾಡಲು ತಯಾರಿ ಕೂಡ ಮಾಡಿಕೊಳ್ಳಲಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.