– ಆಟವಾಡಲೂ ಮೊಬೈಲ್ ಕೊಟ್ಟು ಸ್ಮಶಾನದಲ್ಲೇ ಕೊಲೆ
– ಪ್ರೇಮಿಗಳು ಒಟ್ಟಿಗೆ ಇದ್ದುದ್ದನ್ನ ನೋಡಿದ್ದೆ ತಪ್ಪಾಯ್ತು
ಚೆನ್ನೈ: ಏಕಾಂತದಲ್ಲಿದ್ದುದನ್ನು ನೋಡಿದ್ದಕ್ಕೆ ಪ್ರೇಮಿಗಳಿಬ್ಬರು 8 ವರ್ಷದ ಬಾಲಕನನ್ನು ಕೊಲೆ ಮಾಡಿರುವ ಘಟನೆ ತಮಿಳುನಾಡಿನ ತಿರುಪುರ್ ಜಿಲ್ಲೆಯಲ್ಲಿ ನಡೆದಿದೆ.
ಭವನೇಶ್ (8) ಕೊಲೆಯಾದ ಬಾಲಕ. 17 ವರ್ಷದ ಅಪ್ರಾಪ್ತ ಹುಡುಗಿ ಮತ್ತು ಆಕೆಯ ಪ್ರಿಯಕರ ಅಜಿತ್ ಕುಮಾರ್(21) ಇಬ್ಬರು ಸೇರಿ ಕೊಲೆ ಮಾಡಿದ್ದಾರೆ. ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಏನಿದು ಪ್ರಕರಣ?
ತಂಗರಾಜ್ ಮತ್ತು ಸುಮತಿ ದಂಪತಿಯ ಪುತ್ರ ಭವನೇಶ್ 3ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಈ ದಂಪತಿ ಬನಿಯನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ಗುರುವಾರ ಬೆಳಗ್ಗೆ ಪೋಷಕರು ಕೆಲಸಕ್ಕೆ ಹೋಗಿದ್ದಾರೆ. ಇತ್ತ ಮೃತ ಬಾಲಕ ಆಟವಾಡಲು ಮನೆಯಿಂದ ಹೊರಗೆ ಹೋಗಿದ್ದಾನೆ. ಆದರೆ ಭವನೇಶ್ ಸಂಜೆಯಾದರೂ ಮನೆಗೆ ಹಿಂದಿರುಗಲಿಲ್ಲ. ಕೆಲಸಕ್ಕೆ ಹೋಗಿದ್ದ ಪೋಷಕರು ಸಂಜೆ ಮನೆಗೆ ಬಂದು ಎಲ್ಲ ಕಡೆ ಹುಡುಕಾಡಿದ್ದಾರೆ. ಆದರೆ ಎಲ್ಲೂ ಭವನೇಶ್ ಪತ್ತೆಯಾಗಿಲ್ಲ. ಕೊನೆಗೆ ಪೋಷಕರು ಪೊಲೀಸರಿಗೆ ಈ ಕುರಿತು ದೂರು ನೀಡಿದ್ದಾರೆ.
ಪೊಲೀಸರು ಗುರುವಾರ ರಾತ್ರಿ ನಾಪತ್ತೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಶುಕ್ರವಾರ ಬೆಳಗ್ಗೆ ಸ್ಥಳೀಯರು ಸ್ಮಶಾನದ ಬಳಿ ಬಾಲಕನ ಶವ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಆಗ ಭನವೇಶ್ ಶವವಾಗಿ ಪತ್ತೆಯಾಗಿದ್ದನು. ನಂತರ ಬಾಲಕನ ದೇಹದ ಮೇಲೆ ಅನೇಕ ಗಾಯಗಳಾಗಿದ್ದು, ಯಾರೋ ಹೊಡೆದು ಕೊಲೆ ಮಾಡಿದ್ದಾರೆ ಎಂಬುದು ತಿಳಿದುಬಂದಿದೆ. ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಭವನೇಶ್ ತನ್ನ ಮನೆಯಿಂದ ಸ್ವಲ್ಪ ದೂರದಲ್ಲಿ ಶವವಾಗಿ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಥವಾಮಣಿ ನೇತೃತ್ವದ ತಂಡ ಬಾಲಕನ ಕೊಲೆಯ ಬಗ್ಗೆ ತನಿಖೆ ಮಾಡಲು ಶುರು ಮಾಡಿದ್ದರು. ಮೊದಲು ತನಿಖಾ ಅಧಿಕಾರಿಗಳು ಬಾಲಕನ ಸಂಬಂಧಿಕರು, ನೆರೆಹೊರೆಯವರನ್ನು ವಿಚಾರಣೆ ಮಾಡಿದ್ದಾರೆ. ನಂತರ ಅದೇ ಪ್ರದೇಶ ಮಕ್ಕಳನ್ನ ವಿಚಾರಣೆ ಮಾಡಿದ್ದಾರೆ. ಆಗ ಮಕ್ಕಳು ಅಪ್ರಾಪ್ತ ಹುಡುಗಿ ಮತ್ತು ಆತನ ಪ್ರಿಯಕರನೊಂದಿಗೆ ಭವನೇಶ್ ಇದ್ದನು ಎಂದು ತಿಳಿಸಿದ್ದಾರೆ. ತಕ್ಷಣ ಇಬ್ಬರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ತಾವೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಬಾಲಕ ಭವನೇಶ್ ಅಪ್ರಾಪ್ತ ಹುಡುಗಿಯ ಮನೆಯಲ್ಲಿ ನಾವಿಬ್ಬರು ಒಟ್ಟಿಗೆ ಇದ್ದುದ್ದನ್ನು ನೋಡಿದ. ಅಲ್ಲದೆ ಇದನ್ನು ನನ್ನ ಪ್ರೇಯಸಿಗೆ ತಿಳಿಸುವುದಾಗಿ ಬೆದರಿಕೆ ಹಾಕಿದನು ಎಂದು ಆರೋಪಿ ಅಜಿತ್ ಹೇಳಿದ್ದಾನೆ. ಆರೋಪಿ ಅಜಿತ್ ಈಗಾಗಲೇ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಆದರೂ ಅಪ್ರಾಪ್ತೆಯ ಜೊತೆ ಅನೈತಿಕ ಸಂಬಂಧ ಹೊಂದಿದ್ದನು. ಮೃತ ಬಾಲಕ ಅವರಿಬ್ಬರು ಒಟ್ಟಿಗೆ ಇರುವುದನ್ನು ನೋಡಿದ್ದಾನೆ.
ಆರೋಪಿಗಳಿಬ್ಬರು ಬಾಲಕನ್ನು ಸಮೀಪದ ಸ್ಮಶಾನದ ಬಳಿ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಬಾಲಕನಿಗೆ ಗೇಮ್ ಆಡಲು ಮೊಬೈಲ್ ಕೊಟ್ಟಿದ್ದಾರೆ. ಈ ವೇಳೆ ಅಪ್ರಾಪ್ತೆ ಹುಡುಗಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದನ್ನು ತನ್ನ ಪ್ರಿಯತಮೆಗೆ ಹೇಳದಂತೆ ಮನವಿ ಮಾಡಿಕೊಂಡಿದ್ದಾನೆ. ಆದರೆ ಬಾಲಕ ಇಬ್ಬರ ಸಂಬಂಧವನ್ನು ಪ್ರಿಯತಮೆಗೆ ಹೇಳುವುದಾಗಿ ಹೇಳಿದ್ದಾನೆ. ಇದರಿಂದ ಕೋಪಗೊಂಡ ಇಬ್ಬರು ಅಲ್ಲೆ ಬಿದ್ದಿದ್ದ ಬಾಟಲ್ ತೆಗೆದುಕೊಂಡು ಬಾಲಕನಿಗೆ ಇರಿದು ಕೊಲೆ ಮಾಡಿದ್ದಾನೆ. ನಂತರ ಮೃತದೇಹವನ್ನು ಅಲ್ಲೆ ಬಿಟ್ಟು ಹೋಗಿದ್ದಾರೆ ಎಂದು ತನಿಖಾ ಅಧಿಕಾರಿ ತಿಳಿಸಿದ್ದಾರೆ.
ಸದ್ಯಕ್ಕೆ ಅಪ್ರಾಪ್ತೆ ಮತ್ತು ಅಜಿತ್ಕುಮಾರ್ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ.