ಹಾಸನ: ಪ್ರೀತಿ ನಿರಾಕರಿಸಿದ ಯುವತಿಯನ್ನು ನಡುರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಹಾಸನದಲ್ಲಿ ನಡೆದಿದೆ.
ಹೇಮಂತ್ (25) ಕೊಲೆ ಮಾಡಿದ ಆರೋಪಿಯಾಗಿದ್ದು, ಸಕಲೇಶಪುರ ತಾಲೂಕಿನ ಬಾಳೆಗದ್ದೆ ಸಮೀಪದ ಸಿದ್ದಾಪುರ ಗ್ರಾಮದ ಸುಶ್ಮಿತಾ (21) ಕೊಲೆಯಾದ ಯುವತಿ. ಪ್ರೀತಿ ನಿರಾಕರಣೆಯೇ ಕೊಲೆಗೆ ಕಾರಣ ಎನ್ನಲಾಗಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಹೇಮಂತ್ ಎಂಬಾತ ಸುಶ್ಮಿತಾಳನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. 1 ವರ್ಷದ ಹಿಂದೆ ಮದುವೆಯಾಗಲು ಆಕೆಗೆ ಮನವಿ ಮಾಡಿದ್ದ. ಆದ್ರೆ ಸುಶ್ಮಿತಾ ಯಾವುದೇ ಪ್ರತ್ಯುತ್ತರ ನೀಡಿರಲಿಲ್ಲ.
ಮತ್ತೆ ಈ ಬಾರಿ ತನ್ನ ಪ್ರೇಮ ನಿವೇದನೆಯನ್ನು ಸುಶ್ಮಿತಾ ಮುಂದೆ ತೋಡಿಕೊಂಡಿದ್ದ ಎನ್ನಲಾಗಿದೆ. ಆದರೂ ಮದುವೆಗೆ ನಿರಾಕರಣೆ ಮಾಡಿದ ಹಿನ್ನೆಲೆಯಲ್ಲಿ ಆರೋಪಿ ಹೇಮಂತ್ ಕೊಲೆ ಮಾಡಲು ಯೋಜಿಸಿದ್ದು ಇಂದು ಕೊಲೆಗೈದಿದ್ದಾನೆ. ಮನೆಯಿಂದ ಹೊರಬಂದು ಬೇರೆಡೆಗೆ ತೆರಳುತ್ತಿದ್ದ ಯುವತಿಯನ್ನು ಕಂಡು ಆರೋಪಿ ಹೇಮಂತ್ ಮಾರಕಾಸ್ತ್ರದಿಂದ ಆಕೆಯ ಮೇಲೆ ಮನಸೋಇಚ್ಛೆ ಹಲ್ಲೆ ಮಾಡಿದ್ದಾನೆ. ಏಕಾಏಕಿ ದಾಳಿ ನಡೆದ ಹಿನ್ನೆಲೆಯಲ್ಲಿ ಸುಶ್ಮಿತಾ ಸಹಾಯಕ್ಕೆ ಬೇರೆಯವರನ್ನು ಕೂಗಲು ಸಹ ಸಾಧ್ಯವಾಗದೆ ರಕ್ತಸಿಕ್ತವಾಗಿ ಸ್ಥಳದಲ್ಲೇ ಬಿದ್ದದ್ದರಿಂದ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾಳೆ.
ಘಟನೆ ನಡೆದ ಬಳಿಕ ಆರೋಪಿ ಹೇಮಂತ್ ತಲೆಮರೆಸಿಕೊಂಡಿದ್ದಾನೆ. ಸ್ಥಳಕ್ಕೆ ಸಕಲೇಶಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹವನ್ನು ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆ ರವಾನಿಸಿದ್ದಾರೆ. ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪೋಷಕರು ದೂರು ನೀಡಿದ್ದು ದೂರಿನನ್ವಯ ತನಿಖೆ ಮುಂದುವರಿಸಿದ್ದಾರೆ.