ಮಡಿಕೇರಿ: ಪ್ರೀತಿಸುವಾಗ ಅಡ್ಡ ಬಾರದ ಧರ್ಮ ಮದುವೆಯಾಗುವಾಗ ಅಡ್ಡಬರುವುದೇಕೆ ಎಂದು ಪ್ರಶ್ನಿಸುವ ಮೂಲಕ ಲವ್ ಜಿಹಾದ್ ಕಾನೂನು ಅನುಷ್ಠಾನಕ್ಕೆ ತರುವ ಶಾಸಕ ಸಿ.ಟಿ.ರವಿ ಹೇಳಿಕೆಯನ್ನು ಸಂಸದ ಪ್ರತಾಪ್ ಸಿಂಹ ಸಮರ್ಥಿಸಿಕೊಂಡಿದ್ದಾರೆ.
ಮಡಿಕೇರಿಯಲ್ಲಿ ಮಾತಾನಾಡಿದ ಅವರು, ಉತ್ತರ ಪ್ರದೇಶದಲ್ಲಿ ವಿವಾಹವಾಗುವ ಮೊದಲು ಮತಾಂತರಕ್ಕೆ ಒತ್ತಡ ಹೇರುವಂತಿಲ್ಲ. ಒಂದು ವೇಳೆ ಹಾಗೆ ಮಾಡಿದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ನಮ್ಮಲ್ಲಿ ಕೂಡ ಆ ಕಾನೂನು ಜಾರಿ ಮಾಡುವುದಾಗಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ ಎಂದರು.
ಮದುವೆಯಾಗಲು ಮತಾಂತರ ಆಗುವುದು ಕಡ್ಡಾಯ ಎನ್ನುವವರು ನಿಜವಾಗಿ ಧರ್ಮಾಂಧರು. ಕೆಲವರಲ್ಲಿ ರಕ್ತಗತವಾಗಿಯೇ ಮತಾಂಧತೆ ಅಡಗಿದೆ. ಸಿಎಂ ಯಡಿಯೂರಪ್ಪ ಅವರು ರಾಜ್ಯದಲ್ಲಿ ಟಿಪ್ಪು ಜಯಂತಿಯನ್ನು ರದ್ದುಪಡಿಸಿದಂತೆ ಮುಂದಿನ ದಿನಗಳಲ್ಲಿ ಲವ್ ಜಿಹಾದ್ಗೆ ಕಠಿಣವಾದ ಕಾನೂನು ರೂಪಿಸುತ್ತಾರೆ ಎನ್ನುವ ಭರವಸೆ ಇದೆ ಎಂದು ಪ್ರತಾಪ್ ಸಿಂಹ ವಿಶ್ವಾಸ ವ್ಯಕ್ತಪಡಿಸಿದ್ದಾರೆ.