– ಅನಾಥವಾದ 2 ವರ್ಷದ ಮಗ, 8 ತಿಂಗ್ಳ ಕಂದಮ್ಮ
ಹೈದರಾಬಾದ್: ಪ್ರೀತಿಸಿ ಮನೆಯವರ ವಿರೋಧದ ನಡುವೆಯೂ ಮದುವೆಯಾಗಿದ್ದ ದಂಪತಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವ ಘಟನೆ ತೆಲಂಗಾಣದ ಮಡಕ್ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಧರ್ಮರಾಮ್ ಗ್ರಾಮದಲ್ಲಿ ಬುಧವಾರ ರಾತ್ರಿ ಆತ್ಮಹತ್ಯೆಗೆ ಯತ್ನಿಸಿದ ದಂಪತಿ ಶುಕ್ರವಾರ ಮೃತಪಟ್ಟಿದ್ದಾರೆ. ಮೃತರನ್ನು ವಿಜಯ್ ಕುಮಾರ್ ರೆಡ್ಡಿ (28) ಮತ್ತು ರುಚಿತಾ (25) ಎಂದು ಗುರುತಿಸಲಾಗಿದೆ ಅಂತ ಪೊಲೀಸರು ತಿಳಿಸಿದ್ದಾರೆ.
ಮೃತ ರೆಡ್ಡಿ ಗ್ರಾಮ ಕಂದಾಯ ಸಹಾಯಕನಾಗಿ ಕೆಲಸ ಮಾಡುತ್ತಿದ್ದನು. ರೆಡ್ಡಿ ಐದು ವರ್ಷಗಳ ಹಿಂದೆ ತನ್ನ ಪೋಷಕರು ಮತ್ತು ಕುಟುಂಬದವರ ಇಚ್ಛೆಗೆ ವಿರುದ್ಧವಾಗಿ ರುಚಿತಾಳನ್ನು ಪ್ರೀತಿಸಿ ಮದುವೆಯಾಗಿದ್ದನು. ದಂಪತಿಗೆ ಎರಡು ವರ್ಷದ ಮಗ ಮತ್ತು ಎಂಟು ತಿಂಗಳ ಹೆಣ್ಣು ಮಗು ಇದೆ.
ರೆಡ್ಡಿ ಮತ್ತು ರುಚಿತಾ ಬುಧವಾರ ರಾತ್ರಿ ವಿಷಕಾರಿ ಪದಾರ್ಥಗಳನ್ನು ಸೇವಿಸಿದ್ದಾರೆ. ಆದರೆ ಅವರನ್ನು ಆಸ್ಪತ್ರೆಗೆ ದಾಖಲಿಸುವುದು ವಿಳಂಬವಾಗಿದ್ದರಿಂದ ಅವರ ಸ್ಥಿತಿ ಗಂಭೀರವಾಗಿತ್ತು. ಕೊನೆಗೆ ಅವರನ್ನು ಸಿದ್ದಿಪೇಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ರಾತ್ರಿ ರುಚಿತಾ ಸಾವನ್ನಪ್ಪಿದ್ರೆ, ಪತಿ ಶುಕ್ರವಾರ ಮುಂಜಾನೆ ಮೃತಪಟ್ಟಿದ್ದಾನೆ. ಈಗ ಮಕ್ಕಳನ್ನು ಅನಾಥರಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸದ್ಯಕ್ಕೆ ವಿಜಯ್ ಕುಮಾರ್ ರೆಡ್ಡಿ ಅವರ ಪೋಷಕರು ದಂಪತಿಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ರುಚಿತಾ ಪೋಷಕರು ದೂರು ದಾಖಲಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.