– ವಿಚ್ಛೇದನ ನೀಡಿದರೆ ಜೀವನಾಂಶ ಕೊಡಬೇಕೆಂದು ಕೊಲೆ
ಹಾಸನ: ಪ್ರೀತಿಸಿ ಮದುವೆಯಾಗಿದ್ದ ಹೆಂಡತಿಯನ್ನು ಕೊಲೆ ಮಾಡಿ, ಸಾಕ್ಷಿ ನಾಶಪಡಿಸಲು ಮೃತದೇಹವನ್ನು ಕೆರೆಗೆ ಎಸೆದು ಕಣ್ಮರೆಯಾಗಿದ್ದ ಗಂಡ ಸೇರಿದಂತೆ ಐವರನ್ನು ಬಂಧಿಸುವಲ್ಲಿ ಹಾಸನ ಗ್ರಾಮಾಂತರ ವೃತ್ತ ಪೊಲೀಸರು ಯಶಸ್ವಿಯಾಗಿದ್ದಾರೆ.
ನವೆಂಬರ್ 1ರಂದು ದುದ್ದ ಪೊಲೀಸ್ ಠಾಣಾ ವ್ಯಾಪ್ತಿಯ, ಚೀರನಹಳ್ಳಿ ಗ್ರಾಮದ ಕೆರೆಯ ನೀರಿನಲ್ಲಿ ಸುಮಾರು 25-30 ವರ್ಷ ವಯಸ್ಸಿನ ಅಪರಿಚಿತ ಮಹಿಳೆ ಶವವು ಪತ್ತೆಯಾಗಿತ್ತು. ಈ ಸಂಬಂಧ ದುದ್ದ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲಾಗಿತ್ತು.
ಈ ವೇಳೆ ಮೃತಳ ಹೆಸರು ಸುಶ್ಮಿತಾ ಎಂದು ಪತ್ತೆಯಾಗಿದ್ದು, ಈಕೆ ಸುಮಾರು 6 ವರ್ಷಗಳ ಹಿಂದೆ ನಾಗರಾಜು ಎಂಬಾತನನ್ನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದಳು. ಇವರಿಗೆ 4 ವರ್ಷ ಹೆಣ್ಣು ಮಗು ಇತ್ತು. ಗಂಡ ನಾಗರಾಜು ಬೇರೆ ಹೆಣ್ಣಿನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡು ಪತ್ನಿ ಸುಶ್ಮಿತಾಳಿಗೆ ಹಿಂಸೆ ನೀಡುತ್ತಿದ್ದ. ಇದರಿಂದ ಸುಶ್ಮಿತಾ ತನ್ನ ಮಗುವಿನೊಂದಿಗೆ ಕಳೆದ 1 ವರ್ಷದ ಹಿಂದೆ ತಂದೆ ಕೃಷ್ಣಮೂರ್ತಿರವರ ಮನೆಯಲ್ಲಿ ವಾಸವಿದ್ದು, ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿದ್ದಳು. ಇದನ್ನು ಓದಿ: ಪ್ರೀತಿಸಿದಾಕೆ ಜೊತೆ ಮಗ ಎಸ್ಕೇಪ್ – ಪೋಷಕರಿಗೆ ಪೊಲೀಸರಿಂದ ಥಳಿತ
ಗಂಡನಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಳು. ಸುಶ್ಮಿತಾಳಿಗೆ ಜೀವನಾಂಶ ಕೊಡಬೇಕಾಗಬಹುದೆಂದು ಗಂಡ ನಾಗರಾಜು ಹೆಂಡತಿಯನ್ನು ಕೊಲೆ ಮಾಡಿದ್ದ. ನಂತರ ತನ್ನ ತಮ್ಮ ಮೋಹನ್ ಕುಮಾರ್ ಮತ್ತು ಪ್ರೇಯಸಿಯ ಜೊತೆ ಸೇರಿಕೊಂಡು ಕೆರೆಯ ಬಳಿ ಮೃತದೇಹ ಎಸೆದು ಹೋಗಿದ್ದರು. ಇದೀಗ ಗಂಡ ನಾಗರಾಜ್ ಮತ್ತು ಸಾಕ್ಷ್ಯ ನಾಶಪಡಿಸಲು ಸಹಕರಿಸಿದ ನಾಲ್ವರು ಸೇರಿದಂತೆ ಒಟ್ಟು ಐವರು ಆರೋಪಿಗಳನ್ನು ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ.