ಹಾವೇರಿ: ತಾನು ಪ್ರೀತಿಸಿದ ಹುಡುಗಿ ಬೇರೊಬ್ಬ ಯುವಕನನ್ನು ಪ್ರೀತಿಸಿ, ಆತನ ಜೊತೆಗೆ ಓಡಿ ಹೋಗಿದ್ದಕ್ಕೆ ಮನನೊಂದ ಯುವಕ ಆತ್ಮಹತ್ಯೆಗೆ ಶರಣಾದ ಆಘಾತಕಾರಿ ಘಟನೆ ನಡೆದಿದೆ.
ಜಿಲ್ಲೆಯ ಹಿರೇಕೆರೂರು ತಾಲೂಕಿನ ಚಿಕ್ಕ ಬೂದಿಹಾಳ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ರೈತ ಬಸವರಾಜಪ್ಪ ಉಪ್ಪಾರ ಅವರ ಶುಂಠಿ ತೋಟದಲ್ಲಿ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಯುವಕನನ್ನು ಕೇರಳ ಮೂಲದ ಲಾಲು ಎ.ಕೆ(22)ಎಂದು ಗುರುತಿಸಲಾಗಿದೆ. ಮೃತ ಲಾಲು ತನ್ನ ಗ್ರಾಮದ ಪಕ್ಕದ ಊರಿನ ಹುಡುಗಿಯನ್ನು ಪ್ರೀತಿಸುತ್ತಿದ್ದ. ಆದರೆ ಕಳೆದ ಕೆಲವು ದಿನಗಳ ಹಿಂದೆ ಪ್ರೀತಿಸಿದ ಹುಡುಗಿ ಬೇರೊಬ್ಬ ಯುವಕನನ್ನು ಪ್ರೀತಿಸಿ, ಆತನ ಜೊತೆಗೆ ಓಡಿ ಹೋಗಿದ್ದಾಳೆ.
ಪ್ರೀತಿಸಿದ ಹುಡುಗಿ ಓಡಿ ಹೋದ ವಿಷಯ ತಿಳಿದು ಮನನೊಂದ ಯುವಕ ಲಾಲು, ಹುಡುಗಿಯ ಚಿಂತೆಯಲ್ಲಿ ಕೆಲಸ ಮಾಡುತ್ತಿದ್ದ ಶುಂಠಿ ಜಮೀನಿನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಹಂಸಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.