– ಅವಳಿಲ್ಲದೆ ನಾನು ಬದುಕಲು ಸಾಧ್ಯವಿಲ್ಲ
– ಪ್ರೀತಿಸಿ ಮದ್ವೆಯಾದ ಜೋಡಿ ಸಾವು
ಚೆನ್ನೈ: ಪತ್ನಿಯ ಅಗಲಿಕೆಯ ನೋವನ್ನು ಸಹಿಸಲಾಗದೆ ಪತಿ ಕೂಡ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಅರವಿಂದ ರಾಜನ್ (26) ಮೃತ ಯುವಕ. ಈತ ಪತ್ನಿ ಪವಿತ್ರಾ (24) ಸಾವಿನ ನಂತರ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ರಾಜನ್ ದಿಲೀಪನ್ ನಗರದಲ್ಲಿ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದನು. ಈತ ಪವಿತ್ರಾಳನ್ನು ಪ್ರೀತಿಸುತ್ತಿದ್ದನು. ನಂತರ ಇವರಿಬ್ಬರು ಪೋಷಕರನ್ನು ಒಪ್ಪಿಸಿ 2016ರಲ್ಲಿ ಮದುವೆಯಾಗಿದ್ದರು. ವಿವಾಹವಾದ ನಂತರ ಇಬ್ಬರು ತುಂಬಾ ಸಂತಸದಿಂದ ಜೀವನ ನಡೆಸುತ್ತಿದ್ದರು.
ಈ ಜೋಡಿ ಮದುವೆಯಾಗಿ ನಾಲ್ಕು ವರ್ಷಗಳಾದರೂ ಮಕ್ಕಳಾಗಿರಲಿಲ್ಲ. ಇದೇ ವಿಚಾರವಾಗಿ ಇಬ್ಬರ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ಇದರಿಂದ ಮನನೊಂದು ಪವಿತ್ರಾ ಇತ್ತೀಚೆಗೆ ತನ್ನ ತಾಯಿಯ ಮನೆಗೆ ಹೋಗಿದ್ದಳು. ಅಲ್ಲಿ ಇದೇ ತಿಂಗಳ 15 ರಂದು ಮನೆಯಲ್ಲಿ ಯಾರೂ ಇಲ್ಲದಿದ್ದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಪತ್ನಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ತಿಳಿದ ರಾಜನ್ ತುಂಬಾ ಬೇಸರಕೊಂಡಿದ್ದನು. ಕೊನೆಗೆ ಪತ್ನಿಯ ಅಗಲಿಕೆಯನ್ನು ಸಹಿಸಲಾಗದೆ ರಾಜನ್ ಕೂಡ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್ನೋಟ್ ಬರೆದಿದ್ದು, ಅದರಲ್ಲಿ, “ನಾನು ಪವಿತ್ರಾಳನ್ನು ತುಂಬಾ ಪ್ರೀತಿಸುತ್ತಿದ್ದೆ. ಅಲ್ಲದೇ ಪ್ರೀತಿಗಾಗಿ ಮದುವೆಯಾಗಿದ್ದೆ. ಆದರೆ ಈಗ ನಾನು ಅವಳಿಲ್ಲದೆ ಬದುಕಲು ಸಾಧ್ಯವಿಲ್ಲ” ಎಂದು ಬರೆದಿದ್ದಾನೆ.
ಮಾಹಿತಿ ತಿಳಿದು ಸ್ಥಳೀಯ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ.