ಚಿತ್ರದುರ್ಗ: ಪರಪುರುಷ ಮೇಲಿನ ವ್ಯಾಮೋಹದಿಂದಾಗಿ ಗಂಡನನ್ನೇ ಉಸಿರುಗಟ್ಟಿಸಿ ಪತ್ನಿಯೊಬ್ಬಳು ಕೊಲ್ಲಿಸಿರುವ ಘಟನೆ ಚಿತ್ರದುರ್ಗ ತಾಲೂಕಿನ ಅಳವುದರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಚಿತ್ರದುರ್ಗ ತಾಲೂಕು ಅಳವುದರ ಗ್ರಾಮದಲ್ಲಿ ಮುರುಗೇಶ್ ಹಾಗೂ ನಾಗಮ್ಮ ಎಂಬ ದಂಪತಿ ಹಾಯಾದ ಜೀವನ ಸಾಗಿಸುತ್ತಿದ್ದರು. ಆದರೆ ಕಳೆದ ವರ್ಷ ಯುಗಾದಿ ಹಬ್ಬದಂದು ಅಮಾವಾಸ್ಯೆಯ ಅಪಶಕುನದಂತೆ ಈ ಸಂಸಾರದ ಮಧ್ಯೆ ಅರಬಘಟ್ಟ ಗ್ರಾಮದ ಬಸವರಾಜ್ ಬಂದಿದ್ದು, ಸ್ನೇಹದ ನೆಪದಲ್ಲಿ ಹಣದ ವ್ಯವಹಾರ ಬೆಳೆಸಿಕೊಂಡಿದ್ದನು. ಅಂದಿನಿಂದ ಈ ಚೊಕ್ಕ ಸಂಸಾರಕ್ಕೆ ವಕ್ರಗತಿ ಶುರುವಾಗಿದ್ದೂ, ಹಣದ ವ್ಯವಹಾರ ಹಾಗೂ ಸ್ನೇಹದ ಸಲುಗೆಯಲ್ಲಿ ಪದೇ ಪದೇ ಮನೆಗೆ ಬರುತಿದ್ದ ಬಸವರಾಜನ ಮೋಹದ ಪಾಶಕ್ಕೆ ನಾಗಮ್ಮ ಸಿಲುಕಿದ್ದಳು.
ಪ್ರಿಯತಮನಾದ ಬಸವರಾಜ್ ಜೊತೆ ಸೇರಿ, ತನ್ನ ಕ್ಷಣಕಾಲದ ಸುಖಕ್ಕಾಗಿ ತಾಳಿಕಟ್ಟಿದ ಗಂಡನನ್ನೇ ಕೊಲ್ಲಲು ಸ್ಕೆಚ್ ಹಾಕಿದಳು. ಹೊಟ್ಟೆ ನೋವಿನ ನೆಪದಲ್ಲಿ ಕಳೆದ 15 ದಿನಗಳ ಹಿಂದೆ, ರಾತ್ರೋರಾತ್ರಿ ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯೆ ಗಂಡನನ್ನು ಮುಗಿಸಲು ಮುಂದಾಗಿದ್ದರು. ಆದರೆ ಅಂದು ಅವರ ಸ್ಕೆಚ್ ವಿಫಲವಾಗಿದ್ದು, ಎರಡನೇ ಬಾರಿಗೆ ಅವರ ಹೊಲದಲ್ಲಿ ಉಸಿರು ಕಟ್ಟಿಸಿ ಕೊಲ್ಲುವಲ್ಲಿ ಸಕ್ಸಸ್ ಆಗಿದ್ದಾರೆ.
ಇನ್ನು ಬಸವರಾಜನೊಂದಿಗೆ ತನ್ನ ಪತ್ನಿಯ ಅಕ್ರಮ ಸಂಬಂಧ ಹೊಂದಿರುವ ವಿಚಾರ ತಿಳಿದು, ಆಘಾತಗೊಂಡಿದ್ದ ಮುರುಗೇಶನು, ಪತ್ನಿಯಾದ ನಾಗಮ್ಮನೊಂದಿಗೆ ನಿತ್ಯ ಜಗಳವಾಡಿದ್ದನು. ಅಲ್ಲದೇ ಇವರಿಬ್ಬರ ಅಕ್ರಮ ಸಂಬಂಧದ ವಿಚಾರವನ್ನು ಕಾಗದದಲ್ಲಿ ಬರೆದು ತನ್ನ ಸೇಫ್ಟಿಗಾಗಿ ಜೇಬಿನಲ್ಲಿಟ್ಟುಕೊಂಡಿದ್ದನು. ಈ ವಿಚಾರ ತಿಳಿಯದ ಆರೋಪಿಗಳು, ಮುರುಗೇಶನನ್ನು ಕೊಲ್ಲಲು ಒಂದು ಎಣ್ಣೆ ಪಾರ್ಟಿ ಆಯೋಜನೆ ಮಾಡಿ, ಕಂಠ ಪೂರ್ತಿ ಕುಡಿಸಿ ಕೃಷಿ ಹೊಂಡದಲ್ಲಿ ಮುಳುಗಿಸಿ ಕೊಲೆಗೈದು, ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.
ಮಗನ ಸಾವಿನಿಂದ ಅನುಮಾನಗೊಂಡ ಮುರುಗೇಶನ ತಂದೆ ಮಹಾರುದ್ರಪ್ಪ ಭರಮಸಾಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದಾಗ, ಈ ಕಳ್ಳ ಪ್ರಣಯ ಪಕ್ಷಿಗಳ ನವರಂಗಿ ಆಟವನ್ನು ಪೊಲೀಸರು ಬಯಲು ಮಾಡಿದ್ದಾರೆ.
ಸ್ನೇಹಿತನ ಜೊತೆ ಸ್ನೇಹ, ಸ್ನೇಹಿತನ ಹೆಂಡತಿಯ ಜೊತೆ ಮೋಹ ಎರಡು ಕಡೆ ಏಕಕಾಲದಲ್ಲಿ ಬಣ್ಣದ ಆಟವಾಡಿ ಇಡೀ ಕುಟುಂಬದ ಜೀವನ ಹಾಳು ಮಾಡಿದ ಕಿರಾತಕ ಬಸವರಾಜ್ ಹಾಗೂ ಪ್ರಿಯತಮೆ ನಾಗಮ್ಮ ಮಾಡಿದ ತಪ್ಪಿಗೆ ಜೈಲು ಪಾಲಾಗಿದ್ದಾರೆ. ಏನು ಗೊತ್ತಿಲ್ಲದೆ ತನ್ನ ಪಾಡಿಗೆ ಸ್ನೇಹಿತ ಹಾಗೂ ಹೆಂಡತಿಯನ್ನು ನಂಬಿದ್ದ, ಮುರುಗೇಶ್ ಕೊಲೆಯಾಗಿದ್ದು ನಿಜಕ್ಕೂ ದುರಂತ. ಇದನ್ನೂ ಓದಿ:ಉದ್ಯಮಿ ಮನೆಯಲ್ಲಿ ದರೋಡೆ – ಶಿಕ್ಷಕ ಸೇರಿ ಐವರ ಬಂಧನ