ಮೈಸೂರು: ಪ್ರಿಯಕರನ ಜೊತೆ ಸೇರಿ ಪತಿ ಹತ್ಯೆ ಮಾಡಿದ ಪತ್ನಿಯನ್ನು ಕೊಲೆಯಾದ 9 ತಿಂಗಳ ನಂತರ ಪೊಲೀಸರು ಬಂಧಿಸಿದ್ದಾರೆ.
ಈ ಕೊಲೆ ಪ್ರಕರಣ ಭೇಧಿಸಿದ ಪೊಲೀಸರು ಪತ್ನಿ ಉಮಾ ಹಾಗೂ ಪ್ರಿಯಕರ ಅವಿನಾಶ್ ನನ್ನು ಬಂಧಿಸಿದ್ದಾರೆ. ಬನ್ನೂರು ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಅಕ್ಟೋಬರ್ 2020ರಲ್ಲಿ ನಡೆದಿದ್ದ ವೆಂಕಟರಾಜು (50) ಕೊಲೆಯಾಗಿತ್ತು.
ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಹುಣಸಗಳ್ಳಿ ಗ್ರಾಮದ ವೆಂಕಟರಾಜು ಮೂಲತಃ ಮಂಡ್ಯ ಜಿಲ್ಲೆ ಹೊನಗಾನಹಳ್ಳಿ ಗ್ರಾಮದ ನಿವಾಸಿ. 10 ವರ್ಷದ ಹಿಂದೆ ಉಮಾಳನ್ನು ಮದುವೆಯಾಗಿದ್ದ. ಉಮಾ ಶ್ರೀರಂಗಪಟ್ಟಣ ತಾಲೂಕಿನ ಬಳ್ಳೆಕರೆ ಗ್ರಾಮದ ನಿವಾಸಿ. 8 ವರ್ಷದ ಒಂದು ಹೆಣ್ಣು ಮಗು 6 ವರ್ಷದ ಗಂಡು ಮಗುವಿದೆ. ವಯಸ್ಸಿನ ಅಂತರದಿಂದಾಗಿ ಗಂಡ ಹೆಂಡತಿ ನಡುವೆ ಸಂಬಂಧ ಬಿರುಕು ಮೂಡಿತ್ತು. ಈ ವೇಳೆ ಉಮಾಗೆ ಅವಿನಾಶ್ ಪರಿಚಯವಾಗಿದ್ದ. ಇದನ್ನೂ ಓದಿ: ಕಡಲ ಅಬ್ಬರ, ಏಂಡಿ ಬಲೆಗೆ ಸಿಕ್ತು ರಾಶಿ-ರಾಶಿ ಮೀನು
ಅವಿನಾಶ್ ಉಮಾ ಪಕ್ಕದ ಮನೆಯ ನಿವಾಸಿ. ಇಬ್ಬರು ಸೇರಿ ವೆಂಕಟರಾಜು ಕೊಲೆ ಮಾಡಿದ್ದರು. ಅವಿನಾಶ್ ತನ್ನ ಅಜ್ಜಿ ಮನೆಗೆ ವೆಂಕಟರಾಜುನನ್ನು ಕರೆಸಿಕೊಂಡು ಕಾಫಿಯಲ್ಲಿ ನಿದ್ದೆ ಮಾತ್ರೆ ಬೆರೆಸಿ ವೆಂಕಟರಾಜು ನಿದ್ರಾವಸ್ಥೆಯಲ್ಲಿದ್ದಾಗ ಖಾಸಗಿ ಭಾಗಕ್ಕೆ ಹಲ್ಲೆ ಮಾಡಿ, ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ ನಂತರ ಸ್ವಾಭಾವಿಕ ಸಾವು ಎಂಬಂತೆ ಬಿಂಬಿಸಿದ್ದರು.
ಈ ಸಂಬಂಧ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈಗ ಈ ಕೊಲೆ ಪ್ರಕರಣ ಬೇಧಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.