– ಸೋದರಿ ಜೊತೆ ಔಷಧಿ ಖರೀದಿಗೆ ಬಂದಿದ್ದ ಯುವತಿ
– ನಡುರಸ್ತೆಯಲ್ಲಿಯೇ ಗುಂಡಿಟ್ಟು ಕೊಂದ
ರಾಯ್ಪುರ: ಪ್ರಾಮಿಸ್ ಡೇ (ಫೆಬ್ರವರಿ 12)ಗೆ ಪ್ರೀತಿಯನ್ನ ಒಪ್ಪದ ಯುವತಿಗೆ ಯುವಕ ಗುಂಡಿಟ್ಟು ಕೊಲೆಗೈದಿರುವ ಘಟನೆ ಛತ್ತೀಸಗಢದ ಮಹಾಸಮುಂದ್ ನಲ್ಲಿ ನಡೆದಿದೆ.
ಮಹಾಸಮುಂದ ನಗರದ ಸಟೆ ಬೆಲಾಸೋಂಡಾ ಇಲಾಖೆಯಲ್ಲಿ ಈ ಕೊಲೆ ನಡೆದಿದೆ. ರೂಪಾ ಮೃತ ಯುವತಿ. ಶುಕ್ರವಾರ ರೂಪಾ ತನ್ನ ಸೋದರಿ ಹೇಮಲತಾ ಜೊತೆ ಔಷಧಿ ಖರೀದಿಗಾಗಿ ಮಾರುಕಟ್ಟೆಗೆ ಬಂದಿದ್ದಳು. ಈ ವೇಳೆ ರೂಪಾಗಾಗಿ ತನ್ನ ಗೆಳೆಯರಿಬ್ಬರೊಂದಿಗೆ ಚಂದ್ರಶೇಖರ್ ಕಾಯುತ್ತಿದ್ದನು. ರೂಪಾ ಬರುತ್ತಿದ್ದಂತೆ ಆಕೆ ಬಳಿ ಹೋದ ಚಂದ್ರಶೇಖರ್ ತನ್ನ ಪ್ರೀತಿಯನ್ನ ಒಪ್ಪಿಕೊಳ್ಳುವಂತೆ ಪೀಡಿಸಿದ್ದಾನೆ.
ಪ್ರಾಮಿಸ್ ಡೇಗೆ ಪ್ರೀತಿಸುತ್ತೇನೆ ಎಂದು ಮಾತು ನೀಡು ಎಂದು ರೂಪಾಳಿಗೆ ನಡುರಸ್ತೆಯಲ್ಲಿಯೇ ಕಿರುಕುಳ ನೀಡಿದ್ದಾನೆ. ರೂಪಾ ಪ್ರೀತಿಯನ್ನ ತಿರಸ್ಕರಿಸಿದಾಗ ಕೋಪಗೊಂಡ ಚಂದ್ರಶೇಖರ್ ಕಂಟ್ರಿ ಪಿಸ್ತೂಲ್ನಿಂದ ಗುಂಡು ಹಾರಿಸಿ ಪ್ರಿಯತಮೆಯನ್ನು ಕೊಂದಿದ್ದಾನೆ. ಗುಂಡು ತಗಲುತ್ತಿದ್ದಂತೆ ರೂಪಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಘಟನೆ ಬಳಿಕ ಭಯಗೊಂಡ ಚಂದ್ರಶೇಖರ್ ಪರಾರಿ ಆಗಿದ್ದನು.
ಇತ್ತ ಕೊಲೆಯ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಯುವತಿ ಶವವನ್ನು ಆಸ್ಪತ್ರೆಗೆ ರವಾನಿಸಿ ತನಿಖೆ ಕೈಗೆತ್ತಿಕೊಂಡಿದ್ದರು. ಇತ್ತ ಚಂದ್ರಶೇಖರ್ ತಾನೆ ಠಾಣೆಗೆ ತೆರಳಿ ಪೊಲೀಸರ ಮುಂದೆ ಶರಣಾಗಿದ್ದಾನೆ.
ರೂಪಾ ಮತ್ತು ಚಂದ್ರಶೇಖರ್ ಇಬ್ಬರು ಪರಿಚಯಸ್ಥರು. ಆದ್ರೆ ಚಂದ್ರಶೇಖರ್ ಯುವತಿಯನ್ನ ಪ್ರೀತಿಸುತ್ತಿದ್ದನು. ತನ್ನ ಪ್ರಪೋಸಲ್ ತಿರಸ್ಕರಿಸಿದ್ದಕ್ಕೆ ಚಂದ್ರಶೇಖರ್ ಯುವತಿಗೆ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ. ಮರಣೋತ್ತರ ಶವ ಪರೀಕ್ಷೆ ಬಳಿಕ ರೂಪಾ ಮೃತದೇಹವನ್ನ ಕುಟುಂಬಸ್ಥರ ವಶಕ್ಕೆ ನೀಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.