ಕಲಬುರಗಿ: ಪ್ರಾಣಾಪಾಯದಿಂದ ಪಾರಾದ ಮಂಗ ಇದೀಗ ಮನೆ ಸದಸ್ಯನಾಗಿರುವ ಘಟನೆ ಜಿಲ್ಲೆಯ ಯಡ್ರಾಮಿ ತಾಲೂಕಿನ ಅರಳಗುಂಡಗಿ ಗ್ರಾಮದಲ್ಲಿ ನಡೆದಿದೆ.
ಕೆಲ ತಿಂಗಳ ಹಿಂದೆ ಗ್ರಾಮಕ್ಕೆ ಮಂಗಗಳ ಹಿಂಡು ಲಗ್ಗೆಯಿಟ್ಟು, ಇಡೀ ಗ್ರಾಮದ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದವು. ಆ ಹಿಂಡಿನಲ್ಲಿಯೇ ಬಂದ ಮರಿ ಮಂಗವೊಂದು ಮರದಿಂದ ಬಿದ್ದು ಗಾಯಗೊಂಡು ನರಳಾಡುತ್ತಿತ್ತು. ಇದನ್ನು ಗ್ರಾಮದ ಶರಣಗೌಡ ಅವರು ಗಮನಿಸಿ, ಮಂಗನಿಗೆ ಅವರ ಮನೆಯಲ್ಲಿಯೇ ಚಿಕಿತ್ಸೆ ನೀಡಿ ಆರೈಕೆ ಮಾಡಿದ್ದಾರೆ. ಇದಾದ ಬಳಿಕ ಮಂಗ ಗುಣಮುಖವಾದರೂ ಮನೆ ಬಿಟ್ಟು ಹೋಗಿಲ್ಲ. ಶರಣಗೌಡ ಅವರ ಆರೈಕೆಯಿಂದ ಇಂದಿಗೂ ಸಹ ಅವರ ಮನೆ ಸದಸ್ಯೆನಂತೆ ಮನೆಯಲ್ಲಿಯೇ ವಾಸವಾಗಿದೆ.
ಮನೆಯವರ ಪ್ರತಿಯೊಂದು ದೈನಂದಿನ ಕೆಲಸಗಳಿಗೆ ಸಾಥ್ ಕೊಡುವ ಮಂಗ, ಗ್ರಾಮಸ್ಥರೊಂದಿಗೆ ಸ್ನೇಹ ಜೀವಿಯಾಗಿ ಬದುಕುತ್ತಿದೆ. ಇನ್ನು ಈ ಮಂಗಕ್ಕೆ ಊಟ ಪ್ಲೇಟ್ನಲ್ಲೆ ಬೇಕು, ಅನ್ನ ಸಾಂಬಾರ್ ಎಂದರೆ ಪಂಚಪ್ರಾಣ, ಅಲ್ಲದೆ ಊರ ಜನ ಈ ಮಂಗನನ್ನು ದೈವ ಸ್ವರೂಪಿ ಎಂದು ನಂಬಿದ್ದಾರೆ.