ರಾಯಚೂರು: ಎಲ್ಲೆಡೆ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಕೃಷ್ಣ, ತುಂಗಭದ್ರಾ ನದಿಗಳು ಹರಿಯುವ ರಾಯಚೂರು ಜಿಲ್ಲೆಯಲ್ಲಿ ಪ್ರವಾಹ ಭೀತಿ ಎದುರಾಗಿದೆ. ಹೀಗಾಗಿ ರಾಯಚೂರು ಜಿಲ್ಲಾಡಳಿತ ಪ್ರವಾಹದ ಪರಿಸ್ಥಿತಿ ಎದುರಿಸಲು ಮುನ್ನೆಚ್ಚರಿಕೆ ಕ್ರಮಗಳನ್ನ ತೆಗೆದುಕೊಳ್ಳುತ್ತಿದೆ.
ಈ ಹಿನ್ನೆಲೆ ನದಿ ಪಾತ್ರದ ಗ್ರಾಮಗಳು ಹಾಗೂ ನಡುಗಡ್ಡೆಗಳಲ್ಲಿನ ಮುನ್ನೆಚ್ಚರಿಕಾ ಕ್ರಮಗಳನ್ನು ರಾಯಚೂರು ಜಿಲ್ಲಾಧಿಕಾರಿ ಆರ್ ವೆಂಕಟೇಶ್ ಕುಮಾರ್, ಜಿaಲ್ಲಾ ಪಂಚಾಯತ್ ಸಿಇಓ ಲಕ್ಷ್ಮಿಕಾಂತ್ ರೆಡ್ಡಿ ಹಾಗೂ ಎಸ್ಪಿ ಪ್ರಕಾಶ ನಿಕ್ಕಂ ವೀಕ್ಷಣೆ ಮಾಡಿದರು. ಕಳೆದ ವರ್ಷದ ಪ್ರವಾಹದಿಂದ ನದಿ ಪಾತ್ರದ ಬಹುತೇಕ ಗ್ರಾಮಗಳು ನಲುಗಿ ಹೋಗಿದ್ದವು ಹೀಗಾಗಿ ಜಿಲ್ಲಾಡಳಿತ ಪ್ರವಾಹ ಎದುರಿಸಲು ಸಜ್ಜಾಗುತ್ತಿದೆ.
ರಾಯಚೂರು ತಾಲೂಕಿನ ಅತ್ಕೂರು ಹಾಗೂ ನಡುಗಡ್ಡೆ ಕುರ್ವಕುಲಕ್ಕೆ ಅರಗೋಲಿನಲ್ಲಿ ಹೋಗಿ ಗ್ರಾಮಗಳ ಪರಸ್ಥಿತಿ ಅವಲೋಕಿಸಿದ ಅಧಿಕಾರಿಗಳು ಅಲ್ಲಿನ ಗ್ರಾಮಸ್ಥರ ಸಮಸ್ಯೆಗಳನ್ನ ಆಲಿಸಿದರು. ಪ್ರವಾಹ ಮುನ್ನೆಚ್ಚರಿಕಾ ಕ್ರಮಗಳನ್ನು ವೀಕ್ಷಿಸಿ ಬರುವಾಗ ಸುರಿದ ಭಾರೀ ಮಳೆಗೆ ಅಧಿಕಾರಿಗಳೇ ಸಿಲುಕಿಕೊಳ್ಳಬೇಕಾದ ಪರಸ್ಥಿತಿ ಎದುರಾಯಿತು. ಭಾರೀ ಮಳೆ ಹಿನ್ನೆಲೆ ಗ್ರಾಮದ ಮನೆಯೊಂದರಲ್ಲಿ ಆಶ್ರಯ ಪಡೆದ ಜಿಲ್ಲಾಧಿಕಾರಿ, ಎಸ್ಪಿ ಹಾಗೂ ಅಧಿಕಾರಿಗಳು ಸುಮಾರು ಹೊತ್ತು ನಿಂತುಕೊಂಡೇ ಕಾಲಕಳೆದರು.