– ಕಡತಕ್ಕೆ ಸೀಮಿತವಾದ ಸ್ಥಳಾಂತರ ವಿಚಾರ
ಯಾದಗಿರಿ: ಸದ್ಯ ಬಸವಸಾಗರ ಜಲಾಶಯದಿಂದ ಕೃಷ್ಣ ನದಿಗೆ ಬಿಡುತ್ತಿರುವ ನೀರಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ಜಿಲ್ಲಾಡಳಿತ ಪ್ರವಾಹೋತ್ತರ ಕಾರ್ಯಕ್ಕೆ ಮುಂದಾಗಿದ್ದು, ನದಿ ತೀರದ ಗ್ರಾಮಗಳ ಬೆಳೆ ಹಾನಿಯ ವರದಿ ತಯಾರಿಸುತ್ತಿದೆ. ಇದರ ನಡುವೆ ನದಿ ತೀರದ ಗ್ರಾಮಗಳ ಸ್ಥಳಾಂತರ ಕಾರ್ಯ ಕೇವಲ ಕಡತಗಳಲ್ಲಿದ್ದು, ಪ್ರವಾಹ ಬಂದಾಗ ನದಿಯ ನೀರು ಮತ್ತು ಹಿನ್ನೀರಿನಿಂದ ಕೆಲವು ಗ್ರಾಮದ ಗ್ರಾಮಸ್ಥರು ಜೀವ ಕೈಯಲ್ಲಿ ಹಿಡಿದು ಬದುಕಬೇಕಾದ ಪರಿಸ್ಥಿತಿಯಿದೆ.
ಕೃಷ್ಣ ನದಿ ಪ್ರವಾಹಕ್ಕೆ ಮೊದಲು ಹಾನಿಗೊಳಗಾಗುವ ಒಟ್ಟು 9 ಗ್ರಾಮಗಳನ್ನು ಜಿಲ್ಲಾಡಳಿತ ಈಗಾಗಲೇ ಗುರುತಿಸಿದೆ. ಪ್ರತಿ ಬಾರಿ ಪ್ರವಾಹ ಬಂದಾಗ ಗ್ರಾಮಗಳ ಸ್ಥಳಾಂತರ ವಿಚಾರ ಮುನ್ನಲೆಗೆ ಬರುತ್ತೆ, ಪ್ರವಾಹ ತಗ್ಗಿದ ಬಳಿಕ ತಣ್ಣಗಾಗುತ್ತದೆ. ಜಿಲ್ಲಾಡಳಿತ ಈ ದಿವ್ಯ ನಿರ್ಲಕ್ಷ್ಯಕ್ಕೆ ನದಿತೀರದ ಜನ ಹೈರಾಣಾಗಿದ್ದಾರೆ.
ಶಹಾಪೂರ ತಾಲೂಕಿನ ಎಂ.ಕೊಳ್ಳೂರು, ವಡಗೇರಾ ತಾಲೂಕಿನ ಯಕ್ಷಂತಿ, ಗೌಡೂರು, ಚನ್ನೂರು ಗ್ರಾಮಗಳಲ್ಲಿ ಜನರ ತೀವ್ರ ಅಸಮಾಧಾನಗೊಂಡಿದ್ದಾರೆ. ಇನ್ನೂ ಕೆಲವೇ ದಿನಗಳಲ್ಲಿ ಗ್ರಾಮಗಳ ಸ್ಥಳಾಂತರ ಕಾರ್ಯ ಕೈಗೊಳ್ಳದಿದ್ದರೆ ಉಗ್ರ ಹೋರಾಟಕ್ಕೆ ಸಹ ಸಿದ್ಧರಾಗಿದ್ದಾರೆ. ಇದನ್ನೂ ಓದಿ: ಹೀಗೊಂದು ವಿಚಿತ್ರ ಕೋಳಿ ಮೊಟ್ಟೆ – ಮನೆಯವರಿಗೆ ಅಚ್ಚರಿ