ಬೀದರ್: ನಮ್ಮ ಪರಂಪರೆಯಲ್ಲಿ ತಾಯಿಯ ಸ್ಥಾನಮಾನ ಹೊಂದಿರುವ ಗೋವನ್ನು ಪ್ರತಿ ಮನೆಯಲ್ಲಿಯೂ ಪಾಲನೆ ಮಾಡಬೇಕೆನ್ನುವ ಸದಾಶಯ ಹೊಂದಿದ್ದು, ಈ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿವೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ತಿಳಿಸಿದರು.
ಔರಾದ್ ತಾಲೂಕಿನ ಬೋಂತಿ ತಾಂಡಾದಲ್ಲಿ ಜುಲೈ 6ರಂದು ಕೋವಿಡ್ ಲಸಿಕಾಕರಣ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗೋವು ಅತ್ಯಂತ ಪೂಜ್ಯನೀಯ ಪ್ರಾಣಿಯಾಗಿದೆ. ಹಾಲು, ಗೋಮೂತ್ರ ಹಾಗೂ ಸಗಣಿ ಹೀಗೆ ಗೋವಿನ ಪ್ರತಿ ಉತ್ಪನ್ನವೂ ಉಪಯೋಗಕ್ಕೆ ಬರುತ್ತದೆ. ಇವುಗಳಿಗೆ ಉತ್ತಮ ಮಾರುಕಟ್ಟೆ ಕಲ್ಪಿಸಿ ಗೋಪಾಲನೆಯನ್ನು ಇನ್ನಷ್ಟು ಲಾಭದಾಯಕ ಕೆಲಸವನ್ನಾಗಿ ಮಾಡುವ ಪ್ರಯತ್ನಗಳು ನಡೆದಿವೆ. ಯೋಗ ಗುರು ಬಾಬಾ ರಾಮ್ದೇವ್ ಅವರೊಂದಿಗೆ ಮಾತುಕತೆಯೂ ನಡೆದಿದೆ ಎಂದರು.
ಪಶು ಸಂಗೋಪನೆ ಇಲಾಖೆಯನ್ನು ಇಷ್ಟಪಟ್ಟು ಆಯ್ಕೆ ಮಾಡಿಕೊಂಡಿದ್ದೇನೆ. ಧರ್ಮ ಗುರು ಸಂತ ಸೇವಾಲಾಲ ಮಹಾರಾಜರ ಆಶಯದಂತೆ ಗೋವುಗಳನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ. ಈ ಹಿಂದೆ ಎಲ್ಲರೂ ತಾತ್ಸಾರದಿಂದ ನೋಡುತ್ತಿದ್ದ ಪಶು ಸಂಗೋಪನೆ ಇಲಾಖೆಯನ್ನು ಸಚಿವನಾದ ನಂತರ ಎಲ್ಲರೂ ಕಣ್ಣೆತ್ತಿ ನೋಡುವಂತೆ ಬದಲಾವಣೆ ತರಲಾಗಿದೆ ಎಂದರು.