– ಗ್ರಾಮಕ್ಕೆ ತೆರಳಿ ವಿಷ ಸೇವಿಸಿದ ಸಿಂಗ್
ನವದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ಗಡಿಯಲ್ಲಿ ನಡೆದ ಪ್ರತಿಭಟನಾ ಸ್ಥಳದಿಂದ ಮರಳಿದ್ದ ಎರಡು ದಿನದ ಬಳಿಕ ಪಂಜಾಬ್ ಮೂಲದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಯುವಕನನ್ನು ಗುರ್ಲಭ್ ಸಿಂಗ್(22) ಎಂದು ಗುರುತಿಸಲಾಗಿದೆ. ಬಟಿಂತಾ ಜಿಲ್ಲೆಯ ದಯಾಲ್ ಪುರ ಮಿರ್ಜಾ ಗ್ರಾಮದ ನಿವಾಸಿ. ಡಿಸೆಂಬರ್ 18ರ ಶುಕ್ರವಾರದಂದು ಈತ ಪ್ರತಿಭಟನೆಯಿಂದ ಗ್ರಾಮಕ್ಕೆ ವಾಪಸ್ಸಾಗಿದ್ದನು. ಬಳಿಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಯಲ್ಲಿ ಸಿಂಗ್ ಕೆಲವು ವಿಷಕಾರಿ ಪದಾರ್ಥಗಳನ್ನು ಸೇವಿಸಿದ್ದಾನೆ. ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಸಿಂಗ್ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಆತ್ಮಹತ್ಯೆಯ ಹಿಂದಿನ ಕಾರಣವನ್ನು ಇನ್ನೂ ಕಂಡುಹಿಡಿಯಬೇಕಾಗಿಲ್ಲ. ಆದರೆ ಸಿಂಗ್ ಸಣ್ಣ ಮಟ್ಟದ ಕೃಷಿಕನಾಗಿದ್ದು, 6 ಲಕ್ಷ ರೂ. ಸಾಲ ಮಾಡಿದ್ದನು ಎಂದು ಪೊಲೀಸರು ಹೇಳಿದ್ದಾರೆ. ಕೇಂದ್ರದ ಇತ್ತೀಚಿನ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಹರಿಯಾಣ ಮತ್ತು ಪಂಜಾಬ್ ಸೇರಿದಂತೆ ದೇಶದ ವಿವಿಧ ಭಾಗಗಳ ರೈತರು ಎರಡು ವಾರಗಳ ಕಾಲ ದೆಹಲಿಯ ವಿವಿಧ ಗಡಿ ಕೇಂದ್ರಗಳಲ್ಲಿ ಕ್ಯಾಂಪ್ ಮಾಡಿದ್ದಾರೆ.