ನವದೆಹಲಿ: ಕಳೆದ ಒಂದು ತಿಂಗಳಿನಿಂದ ಕೇಂದ್ರ ಸರ್ಕಾರದ ಕೃಷಿ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಪಂಜಾಬ್ ಮತ್ತು ಹರಿಯಾಣದ ಸಾವಿರಾರು ರೈತರಿಗೆ ದೆಹಲಿ ಅರವಿಂದ್ ಕೇಜ್ರಿವಾಲ್ ಸರ್ಕಾರ ಉಚಿತ ವೈಫೈ ಕೊಡುವುದಾಗಿ ಭರವಸೆ ನೀಡಿದೆ.
ಕೇಂದ್ರ ಸರ್ಕಾರದ ಕೃಷಿ ಕಾಯ್ದೆಯ ವಿರುದ್ಧ ಪ್ರತಿಭಟನೆ ಶುರುವಾಗಿರುವುದರಿಂದ ಹಿಡಿದು ಇಲ್ಲಿಯವರೆಗೂ ಸಹಕಾರ ನೀಡುತ್ತಾ ಬಂದಿರುವ ದೆಹಲಿ ಸರ್ಕಾರ ಮತ್ತೆ ರೈತರ ಪರ ಎಂಬಂತೆ ಬಿಂಬಿತವಾಗಿದೆ. ದೆಹಲಿ ಸರ್ಕಾರದೊಂದಿಗೆ ಪ್ರತಿಭಟನಾ ನಿರತ ರೈತರು ಉಚಿತ ವೈಫೈ ಕಲ್ಪಿಸಿಕೊಡುವಂತೆ ಬೇಡಿಕೆ ಇಟ್ಟಿದ್ದರು. ಈ ಬೇಡಿಕೆಯನ್ನು ಸ್ಪಂದಿಸಿದ ದೆಹಲಿ ಸರ್ಕಾರ ಸಿಂಘು ಗಡಿಯ ವಿವಿಧ ಸ್ಥಳಗಳಲ್ಲಿ ಹಾಟ್ಸ್ಪಾಟ್ಗಳನ್ನು ಸ್ಥಾಪಿಸಲು ಮುಂದಾಗಿದೆ. ಇನ್ನೂ ಇದಕ್ಕೂ ಮುನ್ನ ರೈತರಿಗೆ ಅನುಕೂಲವಾಗುವಂತೆ ಮೊಬೈಲ್ ಶೌಚಾಲಯಗಳನ್ನು ನಿರ್ಮಿಸಿಕೊಟ್ಟಿತ್ತು.
ರೈತರ ಸೇವದಾರ್ ಅರವಿಂದ್ ಕೇಜ್ರಿವಾಲ್ ಉಚಿತ ವೈಫೈ ನೀಡಲು ಮುಂದಾಗಿದ್ದಾರೆ. ರೈತರು ತಮ್ಮ ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕೆಂದು ಬಯಸುತ್ತೇವೆ, ಈಗಾಗಲೇ ಕೆಲವು ವೈಫೈ ಹಾಟ್ಸ್ಪಾಟ್ಗಳನ್ನು ಸ್ಥಾಪಿಸಲು ಕೆಲವು ಪ್ರದೇಶಗಳನ್ನು ಗುರುತಿಸಿದ್ದೇವೆ. ಇದು ಅರವಿಂದ್ ಕೇಜ್ರಿವಾಲ್ ಮತ್ತು ನಮ್ಮ ಸರ್ಕಾರದ ಬೆಂಬಲವಾಗಿದೆ ಎಂದು ಎಎಪಿ ಮುಖಂಡ ರಾಘವ್ ಚಡ್ಡಾ ಹೇಳಿದ್ದಾರೆ.
ವಿರೋಧ ಪಕ್ಷದ ತೀವ್ರ ಪ್ರತಿಭಟನೆಯ ಮಧ್ಯೆ ಸೆಪ್ಟೆಂಬರ್ನಲ್ಲಿ ಕೇಂದ್ರ ಸರ್ಕಾರ ಕೃಷಿ ಕಾಯ್ದೆಯನ್ನು ಜಾರಿಗೆ ತಂದಿತ್ತು. ಇದನ್ನು ರದ್ದು ಪಡಿಸುವಂತೆ ಒತ್ತಾಯಿಸಿ ಸಿಂಘು ಗಡಿಯಲ್ಲಿ ನಿರಂತರವಾಗಿ ಹಲವು ರಾಜ್ಯಗಳ ರೈತರ ಸೇರುವಿಕೆಯೊಂದಿಗೆ ಪ್ರತಿಭಟನೆ ನಡೆಯುತ್ತಿದ್ದು, ಕೇಂದ್ರ ಸರ್ಕಾರದ ಹಲವು ಸುತ್ತಿನ ಮಾತುಕತೆಯೂ ಮುರಿದು ಬಿದ್ದಿದೆ.
ಈ ಎಲ್ಲಾ ಆಗುಹೋಗುಗಳ ಮಧ್ಯೆ ರೈತರಿಗೆ ಆಮ್ ಆದ್ಮಿ ಪಕ್ಷ ಮತ್ತು ಅರವಿಂದ್ ಕೇಜ್ರಿವಾಲ್ ಬೆಂಬಲ ಸೂಚಿಸುತ್ತಾ ಬಂದಿದ್ದು, ಕೆಲದಿನಗಳ ಹಿಂದೆ ಪ್ರತಿಭಟನಾ ಸ್ಥಳಕ್ಕೆ ಆಪ್ ಪಾಲಿಕೆ ಸದಸ್ಯರ ತಂಡ ಆಗಮಿಸಿ ರೈತರಿಗೆ ಮಾಡಿದ ಸಹಕಾರವನ್ನು ಪರಿಶೀಲಿಸಿ ದೆಹಲಿ ಸರ್ಕಾರಕ್ಕೆ ಮಾಹಿತಿ ರವಾನಿತ್ತು.