ನವದೆಹಲಿ: ಪ್ರತಿಭಟನಾಕಾರರ ಆಕ್ರೋಶಕ್ಕೆ ವಿಜಯ ನಗರ ಸಾಮ್ರಾಜ್ಯದ ಟ್ಯಾಬ್ಲೊ ತುತ್ತಾಗಿದ್ದು, ಜಖಂ ಆಗಿದೆ. ಶ್ರೀಕೃಷ್ಣದೇವರಾಯನ ವೇಷದಲ್ಲಿದ್ದ ಡಾ.ರಾಜಕುಮಾರ್ ಮೂರ್ತಿಗೆ ಕಿಡಿಗೇಡಿಗಳು ಹಾನಿ ಮಾಡಿದ್ದಾರೆ.
ಗಲಭೆಕೋರರು ನಡೆಸಿದ ದಾಂಧಲೆಯಿಂದ ಕೆಂಪುಕೋಟೆ ಸಂಪೂರ್ಣ ಹಾಳಾಗಿ ಹೋಗಿದೆ. ಸೆಕ್ಯೂರಿಟಿ ರೂಂನಿಂದ ಹಿಡಿದುಕೊಂಡು, ಪರಿಶೀಲನಾ ಕೊಠಡಿ, ಸಿಸಿಟಿವಿ, ಕಂಪ್ಯೂಟರ್, ಟಿಕೆಟ್ ಕೌಂಟರ್, ಫ್ಯಾನ್, ಪೀಠೋಪಕರಣ, ಬ್ಯಾರಿಕೇಡ್ಗಳನ್ನು ಧ್ವಂಸ ಮಾಡಲಾಗಿದೆ. ಕಂಡ ಕಂಡ ಗಾಜುಗಳನ್ನು ಧ್ವಂಸ ಮಾಡಲಾಗಿದೆ. ವೈರ್ ಗಳನ್ನು ಕಟ್ ಮಾಡಲಾಗಿದ್ದು, ಕೆಂಪುಕೋಟೆಯ ಎಲ್ಲಾ ಕಡೆ ವಿದ್ಯುತ್ ಸರಬರಾಜಿಗೂ ವ್ಯತ್ಯಯ ಉಂಟಾಗಿದೆ. ಪೊಲೀಸ್ ಜೀಪ್ ಜಖಂ ಆಗಿದ್ದು, ಕೆಲಸಕ್ಕೆ ಬಾರದಂತಾಗಿದೆ. ನೂರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿ ನಷ್ಟ ಆಗಿದೆ ಎಂದು ಅಂದಾಜಿಸಲಾಗಿದೆ.
ಕೆಂಪುಕೋಟೆ ಹಿಂಸಾಚಾರದ ಮತ್ತಷ್ಟು ಘನಘೋರ ದೃಶ್ಯಗಳು ಒಂದೊಂದಾಗೇ ಬೆಳಕಿಗೆ ಬರ್ತಿವೆ. ಇದರಲ್ಲಿನ ಒಂದು ದೃಶ್ಯದಲ್ಲಂತೂ, ರೈತರ ವೇಷದಲ್ಲಿದ್ದ ಪಾತಕಿಗಳು ದೊಡ್ಡಮಟ್ಟದ ಹಿಂಸಾಕಾಂಡವನ್ನೇ ಸೃಷ್ಟಿಸಿರೋದು ಕಂಡು ಬರುತ್ತೆ. ಖಾಲಿ ಮಾಡಿಸಲು ಬಂದ ಪೊಲೀಸರ ಮೇಲೆ ಕಿಡಿಗೇಡಿಗಳು ತಿರುಗಿಬಿದ್ದಿದ್ದಾರೆ. ಗಲಭೆಕೋರರಿಂದ ತಪ್ಪಿಸಿಕೊಳ್ಳಲು, ತಮ್ಮ ಪ್ರಾಣ ಉಳಿಸಿಕೊಳ್ಳಲು ಕೆಂಪುಕೋಟೆ ಸಮೀಪದಲ್ಲಿದ್ದ 15 ಅಡಿ ಆಳದ ಕಂದಕಕ್ಕೆ ಪೊಲೀಸರು ಧುಮುಕುತ್ತಾರೆ. ಕೆಲವರು ನಿಯಂತ್ರಣ ಕಳೆದುಕೊಂಡು ಕಂದಕಕ್ಕೆ ಉರುಳಿಬೀಳುತ್ತಾರೆ. ಕೇವಲ ಇಲ್ಲೇ 150ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ.
ಟ್ರ್ಯಾಕ್ಟರ್ ಮೂಲಕ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದು, ದೊಣ್ಣೆಗಳ ಮೂಲಕ ಜಖಂ ಮಾಡುವ ದೃಶ್ಯವನ್ನು ಪೊಲೀಸರು ರಿಲೀಸ್ ಮಾಡಿದ್ದಾರೆ. ಈ ಮಧ್ಯೆ ಗಲಭೆಕೋರರು ಟ್ಯಾಬ್ಲೋ ಗಳನ್ನು ಬಿಟ್ಟಿಲ್ಲ. ಅದರಲ್ಲೂ ಪ್ರತಿಭಟನಕಾರರ ಆಕ್ರೋಶಕ್ಕೆ ವಿಜಯ ನಗರ ಸಾಮ್ರಾಜ್ಯದ ಟ್ಯಾಬ್ಲೊ ಬಲಿಯಾಗಿದೆ.