ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಪೌರ ಕಾರ್ಮಿಕನ ಮೇಲೆ ಪೊಲೀಸ್ ದರ್ಪ ತೋರಿ ಕಪಾಳಕ್ಕೆ ಹೊಡೆದಿರುವ ಘಟನೆ ಮಾಗಡಿ ರೋಡ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಜೆಜೆ ನಗರದ ವಾರ್ಡ್ ನಲ್ಲಿ ಪೌರ ಕಾರ್ಮಿಕ ಕಸದ ವ್ಯಾನ್ ನಿಲ್ಲಿಸಿದ್ದರು. ಅಲ್ಲಿಗೆ ಬಂದ ಪೊಲೀಸ್ ನಿಂತಿದ್ದ ಗಾಡಿಗೆ ದಂಡ ಹಾಕಲು ಮುಂದಾಗಿದ್ದಾರೆ. ದಂಡ ಹಾಕುತ್ತಿರುವುದನ್ನ ಪೌರ ಕಾರ್ಮಿಕ ಏರು ಧ್ವನಿಯಲ್ಲಿ ಪ್ರಶ್ನೆ ಮಾಡಿದ್ದಾರೆ. ಪೌರ ಕಾರ್ಮಿಕನ ಪ್ರಶ್ನೆಯಿಂದ ಕೆರಳಿದ ಇನ್ಸ್ಪೆಕ್ಟರ್ ಅವಾಚ್ಯ ಪದಗಳಿಂದ ನಿಂದಿಸಿ ಕಪಾಳಕ್ಕೆ ಹೊಡೆದಿದ್ದಾರೆ.
ಈ ಎಲ್ಲ ದೃಶ್ಯಗಳು ಸಾರ್ವಜನಿಕರ ಮೊಬೈಲಿನಲ್ಲಿ ಸೆರೆಯಾಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸಾರ್ವಜನಿಕರಿಗೆ ಪ್ರಶ್ನಿಸುವ ಹಕ್ಕು ಇಲ್ಲವೇ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.