ಉಡುಪಿ: ನಾಳೆಯಿಂದ ಎಸ್ಎಸ್ಎಲ್ಸಿ ಪರೀಕ್ಷೆ ನಡೆಯಲಿದ್ದು, ಉಡುಪಿಯ ಕೆಲ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಭೇಟಿ ನೀಡಿ, ಪರೀಕ್ಷಾ ವ್ಯವಸ್ಥೆ ಮೇಲ್ವಿಚಾರಣೆ ಮಾಡಿದರು. ನಗರದ ವಳಕಾಡು ಶಾಲೆಗೆ ಭೇಟಿ ನೀಡಿದ ಅವರು, ಸಿದ್ಧತೆ ಗಳ ಪರಿಶೀಲನೆ ಮಾಡಿದರು.
ತರಗತಿಗಳಿಗೆ ಭೇಟಿಕೊಟ್ಟು, ಶಿಕ್ಷಕರು ಸಿಬ್ಬಂದಿಗಳ ಜೊತೆ ಸಮಾಲೋಚನೆ ಮಾಡಿದರು. ಸರ್ಕಾರಿ ಶಾಲೆಯಲ್ಲಿ ಶೆಲ್ಟರ್ ಇಲ್ಲ. ಅಕ್ಕಪಕ್ಕದ ಕಟ್ಟಡ, ಸಭಾಂಗಣದಲ್ಲಿ ಪೋಷಕರಿಗೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡಿರುವ ಬಗ್ಗೆ ವೀಕ್ಷಣೆ ಮಾಡಿದರು. ಮಾಧ್ಯಮಗಳ ಜೊತೆ ಮಾತಮಾಡಿ, ಪರೀಕ್ಷೆ ನಿರ್ವಹಿಸೋದು ಜಿಲ್ಲಾಡಳಿತದ ಮುಂದಿರುವ ಮಹತ್ವದ ಜವಾಬ್ದಾರಿ. ಇಲಾಖೆ ಸರ್ಕಾರದ ಸಹಕಾರದಿಂದ ಅದನ್ನು ನಡೆಸುತ್ತೇವೆ. ಎಲ್ಲಾ ಪರೀಕ್ಷಾ ಕೇಂದ್ರ ಗಳಲ್ಲಿ ತಯಾರಿ ಮುಗಿದಿದೆ. ಬಹಳ ಚೆನ್ನಾಗಿ, ಸುರಕ್ಷಿತಾ ಕ್ರಮ ಕೈಗೊಂಡಿದ್ದೇವೆ. ಜಿಲ್ಲೆಯಲ್ಲಿ 14,034 ಮಕ್ಕಳು ಪರೀಕ್ಷೆ ಬರೆಯುತ್ತಾರೆ ಎಂದರು.
ಸಾಮಾಜಿಕ ಅಂತರ, ಥರ್ಮಲ್ ಸ್ಕ್ಯಾನಿಂಗ್ ಗೆ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಪರೀಕ್ಷಾ ಕೇಂದ್ರ ಸ್ಯಾನಿಟೈಸ್ ಮಾಡಿದ್ದೇವೆ. ಪರೀಕ್ಷೆ ಸುಲಭವಾಗಿ ನಡೆಯುತ್ತದೆ ಅನ್ನೋ ಆಶಾಭಾವನೆ ಇದೆ. ಜಿಲ್ಲೆಯಲ್ಲಿ ಕ್ವಾರಂಟೈನ್ ಸೆಂಟರ್ ಆಗಿದ್ದ ಮೂರು ಶಾಲೆಗಳಿವೆ. ತಿಂಗಳ ಹಿಂದೆಯೇ ಕ್ವಾರಂಟೈನ್ ಕೇಂದ್ರ ತೆರವು ಮಾಡಿ ಸ್ಯಾನಿಟೈಸ್ ಮಾಡಿದ್ದೇವೆ. ಪ್ರತೀ ಪರೀಕ್ಷೆಯ ನಂತರ ಸ್ಯಾನಿಟೈಸ್ ಮಾಡಲಿದ್ದೇವೆ. ಮಳೆಗಾಲವಾದ ಕಾರಣ ಮಕ್ಕಳಿಗೆ ಶೆಲ್ಟರ್ ಅಗತ್ಯವಿದೆ. ಎಲ್ಲಾ ಸರ್ಕಾರಿ ಶಾಲೆಗಳಲ್ಲೂ ಶೆಲ್ಟರ್ ಇಲ್ಲ. ಮಕ್ಕಳು ಬಂದ ತಕ್ಷಣ ಜ್ವರ ಪರೀಕ್ಷೆ ಮಾಡಿ ತರಗತಿಯೊಳಗೆ ಕಳಿಸುತ್ತೇವೆ ಎಂದರು.
ವಿದ್ಯಾರ್ಥಿಗಳಿಗೆ ಯಾವುದೇ ಆತಂಕ ಬೇಡ. ಮಕ್ಕಳು ಧೈರ್ಯವಾಗಿ ಬಂದು ಪರೀಕ್ಷೆ ಬರೆಯಿರಿ. ಯಾವುದೇ ಕೆ.ಎಸ್.ಆರ್.ಟಿ.ಸಿ ಬಸ್ಸನ್ನು ನಾವು ಬಳಸೋದಿಲ್ಲ. ಖಾಸಗಿ ಶಾಲೆಯ 82 ಬಸ್ ಬಳಕೆ ಮಾಡುತ್ತೇವೆ. ಡೀಸೆಲ್ ವ್ಯವಸ್ಥೆ ಸರ್ಕಾರ ಮಾಡುತ್ತದೆ. ನಾಲ್ಕು ಮಕ್ಕಳು ಕಂಟೈನ್ಮೆಂಟ್ ಝೋನ್ ನಿಂದ ಬರುತ್ತಾರೆ. ಅವರಿಗೆ ಪರೀಕ್ಷೆ ಬರೆಯಲು ಪ್ರತ್ಯೇಕ ವ್ಯವಸ್ಥೆ ಮಾಡಿದ್ದೇವೆ. ಹತ್ತು ಪರೀಕ್ಷಾ ಕೇಂದ್ರ ಹೆಚ್ಚುವರಿಯಾಗಿದೆ. ಹೊಸ ಕಂಟೈನ್ಮೆಂಟ್ ಝೋನ್ ಆದರೆ ಅದನ್ನು ಬಳಸುತ್ತೇವೆ ಎಂದು ಡಿಸಿ ಜಿ. ಜಗದೀಶ್ ಹೇಳಿದರು.