ತುಮಕೂರು: ವೀಕೆಂಡ್ ಕರ್ಫ್ಯೂ ಉಲ್ಲಂಘಿಸಿದವರ ಮೇಲೆ ಕ್ರಮ ಕೈಗೊಳ್ಳಲು ಮುಂದಾದ ಪೊಲೀಸರ ಮೇಲೆಯೇ ಪುಂಡರ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಗುಬ್ಬಿ ತಾಲೂಕಿನ ಕುನ್ನಾಲದಲ್ಲಿ ನಡೆದಿದೆ.
ವೀಕೆಂಡ್ ಕರ್ಫ್ಯೂ ಅವಧಿಯಲ್ಲಿ ಸಿ.ಎಸ್ ಪುರ ಠಾಣೆ ಪಿಎಸ್ಐ ರೌಂಡ್ಸ್ ತೆರಳಿದ್ದರು. ಈ ವೇಳೆ ವ್ಯಕ್ತಿಯೋರ್ವ ಅಂಗಡಿ ಬಾಗಿಲು ತೆರೆದು ಅಕ್ರಮವಾಗಿ ಪೆಟ್ರೋಲ್ ಮಾರುತ್ತಿದ್ದನು. ಇದನ್ನು ಗಮನಿಸಿದ ಪಿಎಸ್ಐ, ಅಂಗಡಿ ಬಾಗಿಲು ಮುಚ್ಚಿಸಿ ಪೆಟ್ರೋಲ್ ಕ್ಯಾನ್ ವಶಕ್ಕೆ ಪಡೆದುಕೊಂಡು ಠಾಣೆಗೆ ತೆರಳಿದ್ದರು. ಇದರಿಂದ ಕುಪಿತಗೊಂಡಿದ್ದ ಅಂಗಡಿ ಮಾಲೀಕ ಹಾಗೂ ಕೆಲವು ಪುಂಡರು ಎರಡನೇ ಬಾರಿಗೆ ಗಸ್ತು ತೆರಳಿದ್ದ ಬೇರೊಬ್ಬಪೊಲೀಸ್ ಪೇದೆ ಕುಮಾರಪ್ಪ ಎಂಬವರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಬಾಟಲ್, ದೊಣ್ಣೆ ಹಿಡಿದು ಪೊಲೀಸ್ ಪೇದೆಯನ್ನು ಥಳಿಸಲು ಮುಂದಾಗಿದ್ದಾರೆ. ಕೂಡಲೇ ಅಲ್ಲಿಂದ ತಪ್ಪಿಸಿಕೊಂಡ ಕುಮಾರಪ್ಪ ಅವರು ಸರ್ಕಲ್ ಇನ್ಸ್ ಪೆಕ್ಟರ್ ಠಾಣೆಗೆ ಬಂದಿದ್ದಾರೆ. ಇದನ್ನೂ ಓದಿ: ಮಂಗಳ ಮುಖಿಯರಿಂದ ಗ್ರಾ.ಪಂ ಸದಸ್ಯನ ಮೇಲೆ ಹಲ್ಲೆ
ವಿಷಯ ತಿಳಿದ ಸಿಎಸ್ಪುರ ಎಸ್.ಐ ಮೋಹನ್ ಸ್ಥಳಕ್ಕೆ ತೆರಳಿದ್ದಾರೆ. ಪೊಲೀಸ್ ವಾಹನ ಬರುತ್ತಿದ್ದಂತೆ ಕುನ್ನಾಲ ಗ್ರಾಮದಲ್ಲಿ ಪುಂಡರ ಗುಂಪೊಂದು ಏಕಾಏಕಿ ಪೊಲೀಸ್ ವಾಹನದ ಮೇಲೆ ದಾಳಿ ನಡೆಸಿದೆ. ಘಟನೆಯಲ್ಲಿ ಪೊಲೀಸ್ ವಾಹನದ ಗಾಜು ಪುಡಿಯಾಗಿದೆ. ಕೂಡಲೇ ಸ್ಥಳಕ್ಕೆ ಎಎಸ್ಪಿ ಉದೇಶ್ ಸ್ಥಳಕ್ಕೆ ಭೇಟಿ ನೀಡಿದ್ದು, ಡಿ.ಆರ್ ತುಕಡಿ ಸ್ಥಳಕ್ಕೆ ದೌಡಾಯಿಸಿದೆ. ಸದ್ಯ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಹಲ್ಲೆಗೆ ಯತ್ನಿಸಿದ ಕಿಡಿಗೇಡಿಗಳನ್ನು ಬಂಧಿಸಲಾಗಿದೆ.