ಹುಬ್ಬಳ್ಳಿ: ಪೊಲೀಸ್ ಜೀಪಿಗೇ ಇನ್ಸ್ಪೆಕ್ಟರ್ ದಂಡ ವಿಧಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದು, ಈ ಬಗ್ಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಗರದ ಚೆನ್ನಮ್ಮ ಸರ್ಕಲ್ ಬಳಿ ಘಟನೆ ನಡೆದಿದ್ದು, ಬೆಳಗಾವಿಯ ಕೆಎಸ್ಆರ್ ಪಿ ವಾಹನದಲ್ಲಿ ಸಾಮಾಜಿಕ ಅಂತರ ಇಲ್ಲದೇ ಸಿಬ್ಬಂದಿ ಪ್ರಯಾಣ ಮಾಡುತ್ತಿದ್ದರು. ಈ ಹಿನ್ನಲೆ ಪೊಲೀಸ್ ಜೀಪ್ ತಡೆದು ಇನ್ಸ್ಪೆಕ್ಟರ್ ರವಿಚಂದ್ರ ಅವರು ದಂಡ ವಿಧಿಸಿದ್ದಾರೆ. ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ ಪೊಲೀಸರು ಕಟ್ಟುನಿಟ್ಟಾಗಿ ವಾಹನ ತಪಾಸಣೆ ಮಾಡುತ್ತಿದ್ದು, ಕೊರೊನಾ ನಿಯಮ ಪಾಲಿಸದ ಯಾವುದೇ ವಾಹನವನ್ನು ಬಿಡುತ್ತಿಲ್ಲ.
ಇದೀಗ ಪೊಲೀಸರು ಸಾಮಾಜಿಕ ಅಂತರ ಕಾಪಾಡದೆ ಪೊಲೀಸ್ ಜೀಪ್ನಲ್ಲಿ ಪ್ರಯಾಣಿಸುತ್ತಿದ್ದಾಗ 250 ರೂ. ದಂಡ ವಿಧಿಸುವ ಮೂಲಕ ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಬಿಸಿ ಮುಟ್ಟಿಸಿದ್ದಾರೆ. ಈ ಕುರಿತು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ 2,100 ಪೊಲೀಸರಿಗೆ 2ನೇ ಅಲೆಯಲ್ಲಿ ಸೋಂಕು ತಗುಲಿದೆ. ಈ ಪೈಕಿ 23 ಪೊಲೀಸ್ ಸಿಬ್ಬಂದಿ ಕೊರೊನಾಗೆ ಬಲಿಯಾಗಿದ್ದಾರೆ. ಇಷ್ಟಾದರೂ ಪೊಲೀಸ್ ಸಿಬ್ಬಂದಿ ಸಹ ನಿರ್ಲಕ್ಷ್ಯ ವಹಿಸಿದ್ದು, ಸಾಮಾಜಿಕ ಅಂತರ ಕಾಪಾಡುತ್ತಿಲ್ಲ. ಅಲ್ಲದೆ ಸರಿಯಾಗಿ ಮಾಸ್ಕ್ ಧರಿಸುತ್ತಿಲ್ಲ.