ಚಾಮರಾಜನಗರ: ಪ್ರೀತಿಸಿದ ಯುವಕ ಮದುವೆಯಾಗಲು ನಿರಾಕರಣೆ ಮಾಡಿದ್ದಾನೆ ಎಂದು ಮನನೊಂದ ಯುವತಿ ನೇಣಿಗೆ ಶರಣಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಹೊನ್ನೂರಿನ ಬೀಚಹಳ್ಳಿ ಗ್ರಾಮದಲ್ಲಿ ನಡೆದಿದೆ.
ನೇಣಿಗೆ ಶರಣಾದ ಯುವತಿಯನ್ನು ನಂದಿನಿ(19) ಎಂದು ಗುರುತಿಸಲಾಗಿದೆ. ನಂದಿನಿ ಅದೇ ಗ್ರಾಮದ ಯೋಗೇಶ್ ಎಂಬಾತನನ್ನ ಪ್ರೀತಿಸುತ್ತಿದ್ದಳು. ಇಬ್ಬರಿಂದಲೂ ಪ್ರೀತಿಗೆ ಒಪ್ಪಿಗೆ ಇತ್ತು. ಅಲ್ಲದೆ ಇಬ್ಬರು ಪ್ರೀತಿಸುತ್ತಿದ್ದ ವಿಚಾರ ಮನೆಯವರಿಗೆ ತಿಳಿದು ಮದುವೆ ಮಾಡಿಕೊಡಲು ಕುಟುಂಬಸ್ಥರು ಕೂಡ ಒಪ್ಪಿಕೊಂಡಿದ್ದರು.
ಕಳೆದ ಆರು ತಿಂಗಳ ಹಿಂದೆ ಎರಡೂ ಮನೆಯವರು ಕುಳಿತು ಮದುವೆ ಮಾತು ಕತೆಯನ್ನು ನಡೆಸಿದ್ದರು. ಆದರೆ ಈ ಮಧ್ಯೆ ಯೋಗೇಶ್ ಗೆ ಪೊಲೀಸ್ ಕೆಲಸ ಸಿಕ್ಕಿತ್ತು. ಕೆಲಸ ಸಿಗುತ್ತಿದಂತೆ ಯೋಗೇಶ್ ತನ್ನ ವರಸೆ ಬದಲಾಯಿಸಿದ್ದಾನೆ. ನಂದಿನಿಯನ್ನು ಮದುವೆ ಯಾಗಲು ನಿರಾಕರಿಸಿದ್ದಾನೆ.
ಪ್ರಿಯತಮನ ಹೊಸ ವರಸೆಯಿಂದ ಮನನೊಂದ ನಂದಿನಿ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆ ಸಂಬಂಧ ನಂದಿನಿ ಪೋಷಕರು ಯಳಂದೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.