ಬೆಂಗಳೂರು: ಪೊಲೀಸ್ ಇಲಾಖೆ ನ್ಯಾಯ ಕೊಡಬೇಕು. ಚಿತ್ರರಂಗ ಸ್ವಚ್ಛ ಆಗಬೇಕು ಅನ್ನೋದು ನನ್ನ ಉದ್ದೇಶ ಎಂದು ಪೊಲೀಸ್ ಕಮಿಷನರ್ ಕಮಲ್ ಪಂತ್ ಹೇಳಿಕೆಗೆ ಇಂದ್ರಜಿತ್ ಲಂಕೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಇಂದ್ರಜಿತ್ ಲಂಕೇಶ್, ಪೊಲೀಸ್ ಕಮಿಷನರ್ ಅವರ ತನಿಖೆಗೆ ಸಹಕರಿಸುತ್ತೀನಿ, ಭದ್ರತೆ ಕೊಡುತ್ತೀನಿ ಅಂತ ಹೇಳಿರೋದು ಸಂತೋಷ. ಆದರೆ ಪೊಲೀಸ್ ಇಲಾಖೆ ಚಿತ್ರರಂಗಕ್ಕೆ ನ್ಯಾಯ ಕೊಡಬೇಕು ಎಂದು ಕಮಲ್ ಪಂತ್ ಅವರ ಹೇಳಿಕೆಯನ್ನು ಸ್ವಾಗತಿಸಿದ್ದಾರೆ. ಇದನ್ನೂ ಓದಿ: ಎನ್ಸಿಬಿ ಸಹಕಾರ ಕೇಳಿದ್ರೆ ನಾವು ಪೂರ್ಣ ಪ್ರಮಾಣದಲ್ಲಿ ಸಹಕರಿಸ್ತೇವೆ: ಕಮಲ್ ಪಂತ್
ಅಲ್ಲದೇ ಚಿತ್ರರಂಗ ಸ್ವಚ್ಛ ಆಗಬೇಕು ಅನ್ನೋದು ನನ್ನ ಉದ್ದೇಶ. ಚಿತ್ರರಂಗಕ್ಕೆ ನನ್ನಿಂದ ಯಾವುದೇ ಧಕ್ಕೆ ಆಗಲ್ಲ. ಚಿತ್ರರಂಗದ ಮಂದಿ ಡ್ರಗ್ಸ್ ಮಾಫಿಯಾದಲ್ಲಿ ಸಿಲುಕಿದೆ ಅಂದಾಗ ಫಿಲಂ ಚೇಂಬರ್ ಮಾತನಾಡಬೇಕಿತ್ತು. ಈ ಹಿಂದೆ ಹನಿಟ್ರ್ಯಾಪ್ ಆರೋಪ ಕೇಳಿ ಬಂದಿತ್ತು. ಆಗಲೂ ಫಿಲಂ ಚೇಂಬರ್ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದರು.
ಕಮಲ್ ಪಂತ್ ಹೇಳಿಕೆ?
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಕಮಲ್ ಪಂತ್ ಅವರು, ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ಮಾಫಿಯಾದ ಬಗ್ಗೆ ಎನ್ಸಿಬಿ ತನಿಖೆ ನಡೆಸುತ್ತಿದೆ. ಎನ್ಸಿಬಿ ಅಧಿಕಾರಿಗಳು ಹೊರಗಡೆಯಿಂದ ಬರುತ್ತಿದ್ದಾರೆ ಎಂದು ನಮಗೆ ಗೊತ್ತಾಗಿದೆ. ಒಂದು ವೇಳೆ ಎನ್ಸಿಬಿ ತಂಡ ನಮ್ಮ ಸಹಕಾರ, ಬೆಂಬಲವನ್ನು ಕೇಳಿದರೆ ನಾವು ಪೂರ್ಣ ಪ್ರಮಾಣದಲ್ಲಿ ಅವರಿಗೆ ಸಹಕಾರ ಕೊಡುತ್ತೇವೆ ಎಂದಿದ್ದರು.
ಇಂದ್ರಜಿತ್ ಲಂಕೇಶ್ ಹೇಳಿಕೆ ಬಗ್ಗೆ ನಮ್ಮ ಪೊಲೀಸರು ಗಮನಿಸಿದ್ದಾರೆ. ಸುಮೋಟೋ ತೆಗೆದುಕೊಳ್ಳುವ ಬಗ್ಗೆ ಚರ್ಚೆ ನಡೆದಿದೆ. ರಕ್ಷಣೆ ಬೇಕು ಅಂದರೆ ಕೊಡೋಣ. ಬಳಿಕ ಸಮನ್ಸ್ ಕೊಡುವುದರ ಬಗ್ಗೆ ಚಿಂತನೆ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಹೇಳಿದ್ದರು.