ಬೆಂಗಳೂರು: ಡಿಜೆ ಹಳ್ಳಿ ಗಲಭೆ ಪ್ರಕರಣದ ಆರೋಪಿಗಳನ್ನ ಬೆಂಗಳೂರಿನಿಂದ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ರವಾನೆ ಮಾಡಲಾಗುತ್ತಿದೆ. ಇದನ್ನೂ ಓದಿ: ಡಿಜೆ ಹಳ್ಳಿ, ಕೆಜಿ ಹಳ್ಳಿಯಲ್ಲಿ ಮಿಡ್ನೈಟ್ ಆಪರೇಷನ್ – ಕಾರ್ಪೊರೇಟರ್ ಪತಿ ಖಲೀಂ ಪಾಷಾ ಅರೆಸ್ಟ್
ಗುರುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಸಿಸಿಬಿ ಪೊಲೀಸರು ಹಾಜರು ಪಡಿಸಿದ್ದರು. ಈ ವೇಳೆ ಆರೋಪಿಗಳಿಗೆ 15 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಬೆಂಗಳೂರಿನಲ್ಲಿ ಆರೋಪಿಗಳನ್ನು ಇರಿಸಿದರೆ ಮತ್ತೆ ಗಲಾಟೆ ಆಗುವ ಮಾಹಿತಿ ಹಿನ್ನೆಲೆಯಲ್ಲಿ ಒಟ್ಟು 80 ಆರೋಪಿಗಳನ್ನು ಕೆಎಸ್ಆರ್ಟಿಸಿ ಬಸ್ ಮೂಲಕ ಬಳ್ಳಾರಿಗೆ ಶಿಫ್ಟ್ ಮಾಡಲಾಗಿದೆ.
ಸಿಸಿಬಿ ಪೊಲೀಸರು ಮತ್ತು ಕೆಎಸ್ಆರ್ಪಿ ಭದ್ರತೆಯೊಂದಿಗೆ ಬಳ್ಳಾರಿಗೆ ಶಿಫ್ಟ್ ಮಾಡಲಾಗುತ್ತಿದ್ದು, ರಾತ್ರಿ 12 ಗಂಟೆಗೆ ಬೆಂಗಳೂರಿನಿಂದ ಬಳ್ಳಾರಿಗೆ ಕಳುಸಿಕೊಟ್ಟಿದ್ದಾರೆ. ಕೊರೊನಾ ಕಾರಣ ಮೂವರನ್ನು ಕೋವಿಡ್ ಕೇರ್ ಸೆಂಟರ್ಗೆ ರವಾನೆ ಮಾಡಲಾಗಿದೆ. ಉಳಿದಂತೆ ಹದಿನೈದು ಆರೋಪಿಗಳನ್ನು ಐದು ದಿನ ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಈ ಹದಿನೈದು ಆರೋಪಿಗಳ ವಿಚಾರಣೆಯನ್ನು ಪೊಲೀಸರು ನಡೆಸಲಿದ್ದಾರೆ.
ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಮತ್ತು ಡಿಜೆಹಳ್ಳಿ ಪೊಲೀಸರು ರಾತ್ರಿ ಕಾರ್ಯಾಚರಣೆ ನಡೆಸಿದ್ದಾರೆ. ರಾತ್ರಿ ಡಿಜೆ ಹಳ್ಳಿಯ ಗಲ್ಲಿ ಗಲ್ಲಿಗಳಲ್ಲಿ ಆರೋಪಿಗಳ ಹುಡುಕಿ ಹುಡುಕಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ತಡರಾತ್ರಿ 12 ಗಂಟೆಗೆ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯನ್ನ ಸುತ್ತುವರೆದ ಪೊಲೀಸರು ಬೆಳಗಿನ ಜಾವ 4 ಗಂಟೆವರೆಗೂ ಕಾರ್ಯಾಚರಣೆ ಮಾಡಿದ್ದಾರೆ.
ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್, ಡಿಸಿಪಿ ಕುಲದೀಪ್ ಕುಮಾರ್ ಜೈನ್, ಡಿಸಿಪಿ ರವಿಕುಮಾರ್ ನೇತ್ರತ್ವದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಸುಮಾರು 100 ಸಿಸಿಬಿ ಅಧಿಕಾರಿಗಳ ತಂಡದಿಂದ ಕಾರ್ಪೊರೇಟರ್ ಪತಿ ಸೇರಿ 60 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯಲ್ಲಿ ಒಟ್ಟಾರೆ ಇದುವರೆಗೆ 200ಕ್ಕೂ ಹೆಚ್ಚು ಆರೋಪಿಗಳು ಬಂಧಿಸಲಾಗಿದೆ. ವಿಡಿಯೋಗಳನ್ನ ಪರಿಶೀಲನೆ ನಡೆಸಿ ಆರೋಪಿಗಳನ್ನು ಡಿಜೆ ಹಳ್ಳಿ ಪೋಲಿಸರು ಅರೆಸ್ಟ್ ಮಾಡಿದ್ದಾರೆ.