– ಮಾಧ್ಯಮದವರೊಂದಿಗೆ ಸಂವಾದ ನಡೆಸಿದ ಎಸ್ಪಿ
ಬೆಂಗಳೂರು: ನೆಲಮಂಗಲ ಉಪ ವಿಭಾಗದ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿದ್ದು, 26 ಲಕ್ಷ ಮೌಲ್ಯದ ಚಿನ್ನಾಭರಣ, 12 ಕೆಜಿ ಗಾಂಜಾ ವಶಪಡಿಸಿಕೊಂಡು, ವಿವಿಧ ಪ್ರಕರಣದಲ್ಲಿ ಒಟ್ಟು 14 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ನೆಲಮಂಗಲ ಟೌನ್ ಠಾಣಾ ಆವರಣದಲ್ಲಿ ಈ ಬಗ್ಗೆ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. ಬೆಂಗಳೂರು ಗ್ರಾಮಾಂತರ ಎಸ್ಪಿ ಡಾ.ಕೋನ ವಂಸಿಕೃಷ್ಣ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನೆಲಮಂಗಲ ಉಪ ವಿಭಾಗದ ಪೊಲೀಸರ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಳೆದ ಒಂದು ತಿಂಗಳಿಂದ ಪತ್ತೆಯಾದ ಪ್ರಕರಣಗಳ ಒಟ್ಟು ಮೊತ್ತ 26 ಲಕ್ಷ 75 ಸಾವಿರ ಮೌಲ್ಯದ ಚಿನ್ನಾಭರಣ, 12 ಕೆಜಿ ಗಾಂಜಾ ವಶ ಪಡಿಸಿಕೊಂಡಿದ್ದು, 10 ಪ್ರಕರಣದಲ್ಲಿ ಅಂತರರಾಜ್ಯ ಆರೋಪಿ ಸೇರಿದಂತೆ ಒಟ್ಟು 14 ಮಂದಿ ಆರೋಪಿಗಳ ಬಂಧನ ಉತ್ತಮ ಬೆಳವಣಿಗೆಯಾಗಿದೆ ಎಂದು ಪೊಲೀಸ್ ಸಿಬ್ಬಂದಿಗಳಿಗೆ ಪ್ರಶಂಸೆ ಮತ್ತು ಅಭಿನಂದನೆ ಸಲ್ಲಿಸಿದರು. ಇದನ್ನೂ ಓದಿ: ಮಾಸ್ಕ್ ಹಾಕಿ ಕುತ್ಕೋ ಅಂದಿದ್ದಕ್ಕೆ KSRTC ನಿರ್ವಾಹಕನ ಹಲ್ಲು ಮುರಿದ ಯುವಕರು
ನೆಲಮಂಗಲ ಗ್ರಾಮಾಂತರ, ಮಾದನಾಯಕನಹಳ್ಳಿ, ನೆಲಮಂಗಲ ಟೌನ್, ಹಾಗೂ ವಿವಿಧ ಠಾಣೆಗಳಲ್ಲಿ ಪತ್ತೆಯಾದ ಪ್ರಕರಣ ಮತ್ತು ಮೌಲ್ಯಗಳನ್ನು ಪತ್ತೆಹಚ್ಚಿ ವಾರಸುದಾರರಿಗೆ ಹಿಂದಿರುಗಿಸುವ ಪ್ರಕ್ರಿಯೆಯಾಗಿದೆ ಎಂದರು. ಡಾ.ಕೋನ ವಂಸಿಕೃಷ್ಣಯವರು ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ನಡೆದ ಮೊದಲ ಪತ್ರಿಕಾಗೋಷ್ಠಿಯಾಗಿದ್ದು, ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಸ್ಥಳೀಯ ಮಾಹಿತಿ ಬಗ್ಗೆ ಚರ್ಚೆಗಳನ್ನು ನಡೆಸಿದರು. ಈ ವೇಳೆ ಡಿವೈಎಸ್ಪಿ ಜಗದೀಶ್, ಸಿಪಿಐ ಕುಮಾರ್, ಹರೀಶ್, ಮಂಜುನಾಥ್, ಅರುಣ್ ಕುಮಾರ್ ಸಾಲಂಕಿ ಹಾಗೂ ಪಿಎಸ್ಐ, ಸಿಬ್ಬಂದಿ ಉಪಸ್ಥಿತರಿದ್ದರು.