ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯನ್ ಅವರ ತಂದೆ ಮಗಳ ಸಾವಿನ ಬಗ್ಗೆ ಸುಳ್ಳು ವದಂತಿ ಹಬ್ಬಿಸುತ್ತಿರುವವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಜೂನ್ 14ರಂದು ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಅವರು ಜೂನ್ 8ರಂದು ಮುಂಬೈನಲ್ಲಿ ಶವವಾಗಿ ಪತ್ತೆಯಾಗಿದ್ದರು. ಮುಂಬೈನ ಮಲಾಡ್ನಲ್ಲಿರುವ ತನ್ನ ಅಪಾರ್ಟ್ಮೆಂಟ್ನ 14ನೇ ಮಹಡಿಯಿಂದ ಹಾರಿ ದಿಶಾ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ವರದಿಯಾಗಿತ್ತು.
ಮಗಳ ಆತ್ಮಹತ್ಯೆ ನಂತರ ಮಾಧ್ಯಮಗಳ ಜೊತೆ ಮಾತನಾಡಿದ್ದ ದಿಶಾ ಅವರ ಕುಟುಂಬಸ್ಥರು, ತನ್ನ ಮಗಳ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸದಂತೆ ಮನವಿ ಮಾಡಿಕೊಂಡಿದ್ದರು. ಆದರೂ ಕೆಲವರು ಆಕೆಯ ಸಾವಿನ ವಿಚಾರವಾಗಿ ವದಂತಿಯನ್ನು ಹಬ್ಬಿಸಿದ್ದರು. ದಿಶಾ ಸಾವನ್ನಪ್ಪಿದಾಗ ಆಕೆ ದೇಹವು ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದೆ. ಜೊತೆಗೆ ಆಕೆಯನ್ನು ರೇಪ್ ಮಾಡಲಾಗಿದೆ ಎಂದು ಸುಳ್ಳು ಸುದ್ದಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.
ಈ ಸುಳ್ಳು ಸುದ್ದಿಯಿಂದ ಬೇಸರಗೊಂಡ ದಿಶಾ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಈ ಸುಳ್ಳು ಸುದ್ದಿಯನ್ನು ತಳ್ಳಿ ಹಾಕಿರುವ ಮುಂಬೈ ಪೊಲೀಸರು, ಆಕೆ ಮೃತದೇಹ ಸಿಕ್ಕಾಗ ಅದರ ಮೈಮೇಲೆ ಬಟ್ಟೆಗಳು ಇದ್ದವು. ಜೊತೆಗೆ ಆಕೆ ಮರಣೋತ್ತರ ಪರೀಕ್ಷೆ ನಡೆಸಿದ್ದು, ಅದರಲ್ಲಿ ಯಾವುದೇ ರೇಪ್ ಆಗಿದೆ ಎಂಬ ವರದಿ ಬಂದಿಲ್ಲ. ಆದರೆ ಕೆಲವರು ಬೇಕು ಎಂದೇ ಸಾಮಾಜಿಕ ಜಾಲತಾಣದಲ್ಲಿ ಈ ರೀತಿಯ ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಈ ತಿಂಗಳ ಆರಂಭದಲ್ಲಿ ದಿಶಾ ವಿಚಾರವಾಗಿ ಮಾತನಾಡಿದ್ದ ಬಿಜೆಪಿ ಮುಖಂಡ ನಾರಾಯಣ್ ರಾಣೆ, ದಿಶಾ ಸಾಲಿಯನ್ ಅವರು ಕಟ್ಟಡದ 14ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿಲ್ಲ. ಅವರನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದರು. ದಿಶಾ ಅವರ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಆಕೆಯ ಖಾಸಗಿ ಭಾಗಗಳಿಗೆ ಗಾಯಗಳಾಗಿರುವ ಬಗ್ಗೆ ವರದಿಯಾಗಿದೆ ಎಂದು ಅವರು ಹೇಳಿದ್ದರು. ಜೊತೆಗೆ ಸುಶಾಂತ್ ಮತ್ತು ದಿಶಾ ಪ್ರಕರಣದಲ್ಲಿ ಮುಂಬೈ ಸರ್ಕಾರ ಅಪಾರಾಧಿಗಳನ್ನು ಬಚಾವ್ ಮಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪ ಮಾಡಿದ್ದರು.