ಬೆಂಗಳೂರು: ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಹಾಗೂ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಖಂಡಿಸಿ ಬೆಂಗಳೂರಲ್ಲಿ ಪ್ರತಿಭಟನೆಗಳನ್ನು ನಡೆಸಲಾಯಿತು. ನಗರದ ಮೌರ್ಯ ವೃತ್ತದಲ್ಲಿ ಆಮ್ ಆದ್ಮಿ ಪಕ್ಷದಿಂದ ಬೇಳೆಕಾಳು, ಬ್ರೆಡ್, ಜಾಮ್, ಬೆಣ್ಣೆಯನ್ನು ಮಾರುವ ಮೂಲಕ ವಿನೂತನ ಪ್ರತಿಭಟನೆ ನಡೆಸಲಾಯಿತು.
ಬೆಂಗಳೂರು ನಗರ ಘಟಕದ ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಮೋಹನ್ ದಾಸರಿ ಮಾತನಾಡಿ, ವಿತ್ತಿಯ ಕೊರತೆ ಹೊಂದಿರುವ, ನವಜಾತ ಶಿಶುವಿನ ತಲೆಗೂ ಋಣಭಾರ ಹೊರಿಸುವ, ಜನಸಾಮಾನ್ಯರ ಮೇಲೆ ಕೃಷಿಕರ ಹೆಸರಿನಲ್ಲಿ ಬೇಳೆಕಾಳುಗಳ, ಕಣ್ಣಿಗೆ ಕಂಡ ಎಲ್ಲಾ ವಸ್ತುಗಳ ಮೇಲೆ ಸೆಸ್ ಭಾರ ಹೇರಿದ ನಿರ್ಮಲಾ ಸೀತರಾಮನ್ ಅವರ “ಸಾಲ”ದ ಬಜೆಟ್ ಇದಾಗಿದೆ. ಇದೊಂದು ಜನ ವಿರೋಧಿ, ಬೂಸಾ ಬಜೆಟ್ ಎಂದು ಕರೆಯಬಹುದು ಎಂದರು.
ಮತ್ತೊಂದೆಡೆ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಹಾಗೂ ಆಹಾರ ಸಾಮಾಗ್ರಿಗಳ ಮೇಲೆ ತೆರಿಗೆ ವಿಧಿಸಿರುವುದನ್ನು ಖಂಡಿಸಿ ಸರ್ವ ಸಂಘಟನೆಗಳ ಒಕ್ಕೂಟದ ವತಿಯಿಂದ ಸಿಎಂ ಶಿವಕುಮಾರ್ ನಾಯಕ್ ನೇತೃತ್ವದಲ್ಲಿ ಎತ್ತಿನ ಗಾಡಿ ಓಡಿಸುವ ಮೂಲಕ ಪ್ರತಿಭಟಿಸಲಾಯಿತು.