– ಉಗ್ರ ರಿಯಾಜ್ ಹತ್ಯೆ ಬಳಿಕ ಮತ್ತೊಂದು ಯಶಸ್ವಿ ಕಾರ್ಯಾಚರಣೆ
– ಕಾರ್ ಬಾಂಬ್ ಮಿಸ್ಸಿಂಗ್
ಶ್ರೀನಗರ: ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಬಾಂಬ್ ತಯಾರಿಕ ಎಕ್ಸ್ ಪರ್ಟ್ ಅಬ್ದುಲ್ ರೆಹಮಾನ್ ಅಲಿಯಾಸ್ ಫೌಜಿ ಬಾಯ್ ಸೇರಿದಂತೆ ಮೂವರು ಉಗ್ರರು ಇಂದು ನಡೆದ ಎನ್ಕೌಂಟರಿನಲ್ಲಿ ಸಾವನ್ನಪ್ಪಿದ್ದಾರೆ. ಉಗ್ರ ರಿಯಾಜ್ ನೈಕೋ ಎನ್ಕೌಂಟರ್ ಬಳಿಕ ಮಹತ್ವದ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ.
ಇಂದು ಬೆಳಗ್ಗೆ ಜಮ್ಮು ಕಾಶ್ಮೀರದ ಪುಲ್ವಾಮಾ ಬಳಿ ಹಳ್ಳಿಯೊಂದರಲ್ಲಿ ಭಾರತೀಯ ಸೇನೆ, ಕಾಶ್ಮೀರ ಪೊಲೀಸ್ ಹಾಗೂ ಸಿಆರ್ ಪಿಎಫ್ ಪಡೆಯ ಜಂಟಿ ಕಾರ್ಯಾಚರಣೆಯಲ್ಲಿ ಉಗ್ರರರನ್ನು ಎನ್ಕೌಂಟರ್ ಮಾಡಲಾಗಿದೆ. ಘಟನೆಯಲ್ಲಿ ಸೇನೆಯ ಯೋಧರೊಬ್ಬರು ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಮೃತ ಫೌಜಿ ಬಾಯ್ ಪಾಕಿಸ್ತಾನಿ ಪ್ರಜೆಯಾಗಿದ್ದು, ದೇಶದಲ್ಲಿ ರಕ್ಷಣಾ ಪಡೆಗಳಿಗೆ ಬಹುದೊಡ್ಡ ಸಮಸ್ಯೆಯಾಗಿದ್ದ. ಐಇಡಿ ಬಾಂಬ್ ತಯಾರಿಕೆಯಲ್ಲಿ ಎಕ್ಸ್ ಪರ್ಟ್, ಜೆಇಎಂ ಉಗ್ರ ಸಂಘಟನೆ ಪರ ಕೆಲಸ ಮಾಡುತ್ತಿದ್ದ ಎಂದು ಕಾಶ್ಮೀರಿ ರೇಂಜ್ನ ಐಜಿಪಿ ವಿನಯ್ ಕುಮಾರ್ ತಿಳಿಸಿದ್ದಾರೆ. ಫೌಜಿ ಎನ್ಕೌಂಟರ್, ರಿಯಾಜ್ ನೈಕೋ ಸಾವಿನ ಬಳಿಕ ಭಾರತ ಸೇನೆಗೆ ಉಗ್ರರ ವಿರುದ್ಧ ಹೋರಾಟಕ್ಕೆ ಸಿಕ್ಕ ಬಹುದೊಡ್ಡ ಯಶಸ್ಸು ಎಂದು ಹೇಳಿದ್ದಾರೆ.
ಸೇನೆಗೆ ಸೋಮವಾರ ಬೆಳಗ್ಗೆ ಮೂವರು ಪಾಕಿಸ್ತಾನಿ ಶಸ್ತ್ರಸಜ್ಜಿತ ಉಗ್ರರು ಎನ್ಕೌಂಟರ್ ನಡೆದಿತ್ತು. ಕಳೆದ ತಿಂಗಳ ಹಿಂದೆಯಷ್ಟೇ ಹಿಜ್ಬುಲ್ ಮುಜಾಹೀದ್ದಿನ್ ಮುಖ್ಯಸ್ಥ ರಿಯಾಜ್ ನೈಕೂನನ್ನು ಸೇನೆ ಹೊಡೆದುರುಳಿಸಿತ್ತು. ಇತ್ತೀಚೆಗೆ ಭದ್ರತಾ ಪಡೆಗಳು ಫೌಜಿ ಬಾಯ್ ತಯಾರಿಸಿದ್ದ ಮೂರು ಕಾರು ಬಾಂಬ್ಗಳಲ್ಲಿ ಒಂದನ್ನು ಪತ್ತೆ ಮಾಡಿ ಸ್ಫೋಟಿಸಿದ್ದರು. ಆದರೆ ಮತ್ತೆರಡು ಕಾರ್ ಬಾಂಬ್ಗಳು ಪತ್ತೆಯಾಗಬೇಕಿದೆ. ಬುಡ್ಗಾಮ್ ಮತ್ತು ಕುಲ್ಗಮ್ ಪ್ರದೇಶಗಳಲ್ಲಿ ಮತ್ತೆರಡು ಬಾಂಬ್ ಕಾರುಗಳು ಇರುವ ಬಗ್ಗೆ ಭದ್ರತಾ ಪಡೆಯ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ನಡೆದಿದ್ದ ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ ಉಗ್ರ ಮಸೂದ್ ಅಜರ್ನ ಸಹೋದರ ಫೌಜಿ ಬಾಯ್ ಎಂಬ ಮಾಹಿತಿ ಲಭಿಸಿದೆ.
ಮಸೂದ್ ಅಜರ್ ನನ್ನು 1991 ಭಾರತ ಸೇನೆ ಜಮ್ಮು ಕಾಶ್ಮೀರದಲ್ಲಿ ಬಂಧಿಸಿತ್ತು. ಆದರೆ 1999ರಲ್ಲಿ ವಿಮಾನ ಅಪಹರಿಸಿ ಅಜರ್ ಮಸೂದ್ನನ್ನು ಬಿಡುಗಡೆಗೊಳಿಸುವಲ್ಲಿ ಉಗ್ರರು ಯಶಸ್ವಿಯಾಗಿದ್ದರು. ಆ ಬಳಿಕ ಭಾರತದಲ್ಲಿ ನಡೆದಿದ್ದ ಪ್ರಮುಖ ದಾಳಿಗಳಲ್ಲಿ ಮಸೂದ್ ಕಾರಣನಾಗಿದ್ದ. ಇನ್ನು ಉಗ್ರ ಫೌಜಿ ಭಾಯ್ನನ್ನು ಲಂಬೂ, ಅದ್ನಾನ್ ಹಾಗೂ ಜಬ್ಬಾರ್ ಎಂದೂ ಕರೆಯಲಾಗುತ್ತದೆ. ಪುಲ್ವಾಮಾ ದಾಳಿಯ ಹಿಂದಿನ ಪ್ರಮುಖ ಮಾಸ್ಟರ್ ಮೈಂಡ್ಗಳಲ್ಲಿ ಫೌಜಿ ಬಾಯ್ ಕೂಡ ಒಬ್ಬ.