ಶ್ರೀನಗರ: ಇಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಭಯೋತ್ಪಾದಕನನ್ನು ಭಾರತೀಯ ಸೇನೆ ಹೊಡೆದು ಹಾಕಿದೆ.
ಮೃತ ಭಯೋತ್ಪಾದಕನನ್ನು ಪುಲ್ವಾಮಾದ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಆಜಾದ್ ಲಲ್ಹಾರಿ ಎಂದು ಗುರುತಿಸಲಾಗಿದೆ. ಇಂದು ಪುಲ್ವಾಮದ ಕಾಮ್ರಾಜಿಪೊರಾದಲ್ಲಿ ಗುಂಡಿನ ದಾಳಿ ನಡೆದಿದೆ. ಭಾರತೀಯ ಸೇನೆ ಮತ್ತು ಸ್ಥಳೀಯ ಪೊಲೀಸರು ಜಂಟಿ ಕಾರ್ಯಾಚರಣೆ ಮಾಡಿದ್ದು, ಘಟನೆಯಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದಾರೆ.
ಹತ್ಯೆಗೀಡಾದ ಆಜಾದ್ ಲಲ್ಹಾರಿ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಆಗಿದ್ದು, ಕಳೆದ ಮೇ 22ರಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಪೇದೆ ಅನೂಪ್ ಸಿಂಗ್ ಅವರನ್ನು ಈತ ಕೊಂದಿದ್ದ. ಜೊತೆಗೆ ಹಲವಾರು ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಪುಲ್ವಾಮದ ಕಾಮ್ರಾಜಿಪೊರಾದಲ್ಲಿ ಭಯೋತ್ಪಾದಕರು ಅಡಗಿರುವ ವಿಚಾರ ತಿಳಿದು ಜಮ್ಮು ಮತ್ತು ಕಾಶ್ಮೀರ ಪೊಲೀಸರು, 53 ರಾಷ್ಟ್ರೀಯ ರೈಫಲ್ಸ್ ಮತ್ತು ಸಿ.ಆರ್.ಪಿ.ಎಫ್ ಜಂಟಿ ಕಾರ್ಯಾಚರಣೆ ಆರಂಭ ಮಾಡಿತ್ತು.
ಶೋಧ ಕಾರ್ಯ ಮಾಡುವ ವೇಳೆ ಭಯೋತ್ಪಾದಕರು ಪೊಲೀಸರು ಮತ್ತು ಸೇನೆಯ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಈ ವೇಳೆ ಭದ್ರತಾ ಪಡೆಗಳು ಕೂಡ ಗುಂಡಿನ ದಾಳಿ ಮಾಡಿದ್ದು, ಈ ವೇಳೆ ಆಜಾದ್ ಲಲ್ಹಾರಿ ಗುಂಡಿನ ದಾಳಿಗೆ ಬಲಿಯಾಗಿದ್ದಾನೆ. ಈ ವೇಳೆ ಓರ್ವ ಭಾರತೀಯ ಸೇನೆಯ ಜವಾನರಿಗೆ ಗುಂಡು ತಗಲಿದ್ದು, ಅವರನ್ನು ಶ್ರೀನಗರದ ಆರ್ಮಿ ಆಸ್ಪತ್ರೆಗೆ ಕರೆತರಲಾಗಿದ್ದು, ಅವರು ಆಸ್ಪತ್ರೆಯಲ್ಲಿ ಹುತಾತ್ಮರಾಗಿದ್ದಾರೆ.