– ಮನೆಯ ಅಂಗಳದಲ್ಲಿ ಪೂಜೆ ನಡೆಸಿ ಬಲಿ
– ಮೂಢನಂಬಿಕೆಗೆ ಬಲಿಯಾದ ಬಾಲಕಿ
ರಾಂಚಿ: ತಂದೆಯೋರ್ವ ಪುತ್ರ ವ್ಯಾಮೋಹದ ಹಿನ್ನೆಲೆ ಆರು ವರ್ಷದ ಮಗಳನ್ನ ಬಲಿ ನೀಡಿರುವ ಘಟನೆ ಜಾರ್ಖಂಡ್ ರಾಜ್ಯದ ಪೇಶರಾರ ಪ್ರಖಂಡ ಪಂಚಾಯ್ತು ವ್ಯಾಪ್ತಿಯ ಬೋಂಡೋಬಾರ್ ಗ್ರಾಮದಲ್ಲಿ ನಡೆದಿದೆ.
26 ವರ್ಷದ ಸುಮನ್ ನಗೆಸಿಯಾ ಮಗಳನ್ನ ಕೊಂದ ತಂದೆ. ಸುಮನ್ ಅನಕ್ಷರಸ್ಥನಾಗಿದ್ದು, ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದನು. ಮದುವೆ ಬಳಿಕ ಮೊದಲ ಮಗು ಹೆಣ್ಣಾಗಿತ್ತು. ಹೆಣ್ಣು ಮಗು ಬಳಿಕ ಸುಮನ್ ಗೆ ಮತ್ತೆ ಮಕ್ಕಳಾಗಿರಲಿಲ್ಲ. ಆದ್ರೆ ಗಂಡು ಮಗು ನಿರೀಕ್ಷೆಯಲ್ಲಿದ್ದ ಸುಮನ್ ಮಂತ್ರವಾದಿಯ ಬಳಿ ಹೋಗಿದ್ದನು.
ಮಂತ್ರವಾದಿ ಬಳಿ ತನಗೆ ಮಗ ಬೇಕಾಗಿರುವ ಬಗ್ಗೆ ಚರ್ಚೆ ನಡೆಸಿದ್ದಾನೆ. ಆಗ ಮಂತ್ರವಾದಿ ಇದ್ದ ಮಗಳನ್ನ ಬಲಿ ನೀಡಿದ್ರೆ ಮುಂದೆ ಗಂಡು ಮಗುವಿನ ಜನನವಾಗಲಿದೆ ಎಂದು ಸುಮನ್ ಕಿವಿ ತುಂಬಿದ್ದಾನೆ. ಮೂಢನಂಬಿಕೆಗೆ ಒಳಗಾದ ಸುಮನ್ ಪತ್ನಿ ಮನೆಯಲಕ್ಲಿ ಇಲ್ಲದ ವೇಳೆ ಮಗಳ ಬಲಿಗೆ ಸಿದ್ಧಪಡಿಸಿದ್ದನು.
ಮಂತ್ರವಾದಿಯ ನೇತೃತ್ವದಲ್ಲಿ ಮನೆಯ ಮುಂಭಾಗದಲ್ಲಿಯೇ ಪೂಜೆ ಮಾಡಿದ ಮಗಳನ್ನ ಕೊಂದಿದ್ದಾನೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಮಂತ್ರವಾದಿ ಗ್ರಾಮದಿಂದ ಎಸ್ಕೇಪ್ ಆಗಿದ್ದಾನೆ.
ಗ್ರಾಮಸ್ಥರು ಸುಮನ್ ನನ್ನು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಇನ್ನು ಘಟನೆ ಬಳಿಕ ಎಸ್ಕೇಪ್ ಆಗಿರೊ ಮಂತ್ರವಾದಿ ಮತ್ತು ಆತನ ಸಹಚರರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.