ಮಡಿಕೇರಿ: ಪಿಂಡ ಪ್ರಧಾನಕ್ಕೆಂದು ಬಂದಿದ್ದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನಡೆದಿದೆ.
ಹುಣುಸೂರು ಮೂಲದ ಸುಬ್ರಹ್ಮಣಿ (29) ಮೃತ ಪಟ್ಟ ದುರ್ದೈವಿ. ಮನೆಯಲ್ಲಿ ಹಿರಿಯರು ಮೃತಪಟ್ಟ ನಂತರ ಕಾವೇರಿ ನದಿಯಲ್ಲಿ ಕುಟುಂಬ ಸಮೇತರಾಗಿ ತ್ರಿವೇಣಿ ಸಂಗಮಕ್ಕೆ ಪಿಂಡ ಪ್ರಧಾನ ಮಾಡಲು ಅಗಮಿಸಿದ್ದರು. ಈ ವೇಳೆ ಈ ಅವಘಡ ಸಂಭವಿಸಿದ್ದು, ಸುಬ್ರಹ್ಮಣಿ ಮೃತಪಟ್ಟಿದ್ದಾನೆ.
ಬೆಳಿಗ್ಗೆ ಪಿಂಡ ಪ್ರಧಾನದ ವೇಳೆ ಸ್ನಾನಕ್ಕೆ ಇಳಿಯುವ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿದ ತಮ್ಮನನ್ನು ರಕ್ಷಿಸಲು ಮುಂದಾಗಿ ಅಣ್ಣಂದಿರು ಅಪಾಯದಲ್ಲಿ ಸಿಲುಕಿದ್ದಾನೆ. ನೀರಿನಲ್ಲಿ ಮುಳುಗುತಿದ್ದ ಅಣ್ಣಂದಿರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಆದರೆ ಇದಕ್ಕೂ ಮೊದಲೇ ಮುಳುಗಿದ ತಮ್ಮ ಮೃತಪಟ್ಟಿದ್ದಾನೆ. ಬದುಕುಳಿದ ಇಬ್ಬರು ಸಹೋದರರಿಗೆ ಭಾಗಮಂಡಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕಳೆದ ಒಂದು ವಾರದಿಂದ ಭಾಗಮಂಡಲ ಸುತ್ತಮುತ್ತ ಅಧಿಕ ಮಳೆಯಾಗಿ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಇದರಿಂದ ಇಂದು ಪಿಂಡ ಪ್ರಧಾನಕ್ಕೆ ಬಂದಾಗ ಈ ಅವಘಡ ಸಂಭವಿಸಿದೆ. ಈ ಸಂಬಂಧ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.