ಯಾದಗಿರಿ: ಆಗಸ್ಟ್ 23 ರಿಂದ ಶಾಲೆ ಆರಂಭ ಮಾಡುತ್ತೇವೆ, ಪಾಸಿಟಿವಿಟಿ ರೇಟ್ 2ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಶಾಲೆ ಆರಂಭ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.
ಧ್ವಜಾರೋಹಣ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಾಲೆ ಆರಂಭ ಮಾಡಬೇಕು, ಪೋಷಕರು ಧೈರ್ಯವಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಿ. ಮಕ್ಕಳ ಊರಿನ ಪಾಸಿಟಿವಿಟಿ ರೇಟ್ ಚೆಕ್ ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಹೆಚ್ಚಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಹೊರಗುತ್ತಿಗೆಯ ಮೂಲಕ ಶಿಕ್ಷಕರನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗುವುದು, ಶಿಕ್ಷಕರ ವರ್ಗಾವಣೆ ಅಧಿಸೂಚನೆ ಬಂದಿದೆ ಆದಷ್ಟು ಬೇಗ ಈ ಕಾರ್ಯ ಆರಂಭವಾಗುತ್ತೆ. ಎಲ್ಲವನ್ನೂ ಅವಲೋಕಿಸಿ ಶಾಲೆ ಆರಂಭಿಸಲಾಗುವುದು ಎಂದರು.
ಸಿ.ಟಿ.ರವಿ ಪ್ರಿಯಾಂಕ ಖರ್ಗೆ ಜಟಾಪಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಷ್ಟ್ರೀಯ ಯೋಜನೆಗಳಿಗೆ ಕೇವಲ ಒಂದೇ ಕುಟುಂಬದ ಮೂರು ಜನರ ಹೆಸರು ಇಟ್ಟರೆ ಹೇಗೆ? ವ್ಯಕ್ತಿಯ ಹಿಂದೆ ನಮ್ಮ ಸರ್ಕಾರ ಹೊಗಿಲ್ಲ. ಇದು ಸಮಾಜದ ದುಡ್ಡು, ಇಲ್ಲಿ ವ್ಯಕ್ತಿಯ ವಯಕ್ತಿಕ ಬೆಳವಣಿಗೆ ಮುಖ್ಯ ಅಲ್ಲ, ದೇಶಕ್ಕಾಗಿ ಬಹಳ ಜನ ಪ್ರಾಣ ಕೊಟ್ಟಿದ್ದಾರೆ. ನಾವು ಅಂತಹವರನ್ನು ಸ್ಮರಿಸಿಕೊಳ್ಳಬೇಕಿದೆ ಎಂದರು.