ಲಕ್ನೋ: ಮದುವೆ ಅಂದರೆ ಆ ಮನೆಯಲ್ಲಿ ಸಂತಸ ಸಂಭ್ರಮ ಮನೆಯಲ್ಲಿ ಕಳೆಗಟ್ಟಿರುತ್ತದೆ. ಅಂತೆಯೇ ಉತ್ತರಪ್ರದೇಶದ ಕಾನ್ಪುರದಲ್ಲಿ ಫಿಕ್ಸ್ ಆಗಿದ್ದ ಮದುವೆ ತಾಳಿ ಕಟ್ಟುವ ಕೆಲವೇ ಗಂಟೆಗಳ ಮುನ್ನ ಕ್ಯಾನ್ಸಲ್ ಆಗಿರುವುದು ಬೆಳಕಿಗೆ ಬಂದಿದೆ.
ಕಾನ್ಪುರದ ಕಂಗಗಂಜ್ ಕಾಲೋನಿ ನಿವಾಸಿ ಪುಷ್ಪಗೆ ಕರೌಲಿ ಗ್ರಾಮದ ನಿವಾಸಿ ಕ್ರಾಂತಿ ಸಿಂಗ್ ಜೊತೆ ಏಪ್ರಿಲ್ 28ರಂದು ಮದುವೆ ನಿಶ್ಚಯವಾಗಿತ್ತು. ಮದುವೆಯ ಸಂಭ್ರಮದಲ್ಲಿದ್ದ ವಧು ಇನ್ನೇನು ಕೆಲವೇ ಗಂಟೆಗಳಲ್ಲಿ ಮದುವೆಯ ಮೆರವಣಿಗೆ ಹೊರಡುವವಳಿದ್ದಳು. ಅದಕ್ಕೂ ಮೊದಲು ಮೇಕಪ್ ಮಾಡಿಕೊಳ್ಳಲೆಂದು ಪಾರ್ಲರ್ ಗೆ ತೆರಳಿದ್ದಾಳೆ. ಈ ವೇಳೆ ವಧುವಿನ ಮೊಬೈಲ್ ಗೆ ಮೆಸೇಜ್ ಒಂದು ಬಂದಿದೆ.
ಮೆಸೇಜ್ ನೋಡಿದ ವಧು ಕಂಗಾಲಾಗಿದ್ದಾಳೆ. ಮದುವೆ ಮುರಿದುಕೊಂಡಿದ್ದೇವೆ ಎಂದು ವರನ ಕಡೆಯಿಂದ ವಧುವಿಗೆ ಮೆಸೇಜ್ ಬಂದಿದ್ದಾಗಿತ್ತು. ಇದನ್ನು ನೋಡಿದ ವಧು ಅವಕ್ಕಾಗಿದ್ದಾಳೆ. ಅಲ್ಲದೆ ಏನು ಮಾಡಬೇಕು ಎಂದು ತೋಚದೆ ಮನೆಗೆ ಓಡೋಡಿ ಬಂದು ವಿಚಾರ ತಿಳಿಸಿದ್ದಾಳೆ. ಕೂಡಲೇ ಕುಟುಂಬಸ್ಥರು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಘಟನೆಯ ಮಾಹಿತಿ ಪಡೆದುಕೊಂಡಿದ್ದಾರೆ.
ಕ್ಯಾನ್ಸಲ್ಗೆ ಕಾರಣವೇನು..?
ವಧುವಿನ ಕಡೆಯವರು ಮದುವೆ ಕಾರ್ಯಕ್ರಮಕ್ಕೆ ಸುಮಾರು 30 ಲಕ್ಷ ಖರ್ಚು ಮಾಡಿದ್ದಾರೆ. ಅಲ್ಲದೆ ವರನಿಗೆ 12 ಲಕ್ಷ ಮೌಲ್ಯದ ಕಾರು ಖರೀದಿಸಿದ್ದಾರೆ. ಆದರೆ ಇದು ಸಾಲಲಿಲ್ಲ, ಇನ್ನಷ್ಟು ವರದಕ್ಷಿಣೆ ಬೇಕು ಎಂದು ವರನ ಕಡೆಯವರು ಮದುವೆ ಕ್ಯಾನ್ಸಲ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.