ನವದೆಹಲಿ: ಪೂರ್ವ ಲಡಾಕ್ನ ಗಾಲ್ವಾನ್ ನದಿ ಕಣಿವೆ ಗಡಿಯಲ್ಲಿ ಸೃಷ್ಟಿಯಾಗಿದ್ದ ಉದ್ವಿಗ್ನ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಗಡಿ ಪ್ರದೇಶದಲ್ಲಿರುವ ಪಾಯಿಂಟ್ 15 ರಿಂದ ಇಂದು ಚೀನಾ ಸೇನೆ ಎರಡು ಕಿ.ಮೀ ಹಿಂದೆ ಸರಿದಿದೆ ಎಂದು ಭಾರತೀಯ ಸೇನಾ ಮೂಲಗಳು ತಿಳಿಸಿವೆ.
ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಜೊತೆಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊವೇಲ್ ಮಾತುಕತೆ ಬಳಿಕ ಉಭಯ ಸೇನೆಗಳು ಜಾಗದಿಂದ ಹಿಂದಕ್ಕೆ ಸರಿಯಲು ಒಪ್ಪಿಗೆ ಸೂಚಿಸಿದ್ದವು. ಸೋಮವಾರ ಪಾಯಿಂಟ್ 14, ಬಿಸಿ ನೀರಿನ ಬುಗ್ಗೆ ಹಾಗೂ ಗೋರ್ಗಾ ಪ್ರದೇಶದಿಂದ ಚೀನಾ 1.5 ಕಿಮೀ ಹಿಂದೆ ಸರಿದಿತ್ತು. ಇಂದು ಪಾಯಿಂಟ್ ನಂ 15ರಿಂದಲೂ ಚೀನಾ ಖಾಲಿ ಮಾಡಿದೆ.
ಚೀನಾ ಸೈನ್ಯದ ಚಲನವಲನಗಳ ಬಗ್ಗೆ ಭಾರತೀಯ ಸೇನೆ ಎಚ್ಚರಿಕೆ ವಹಿಸಿದೆ. ಚೀನಾ ಸೇನೆ ಪ್ರಮಾಣಿಕವಾಗಿ ಹಿಂದಕ್ಕೆ ಹೋಗುತ್ತಿದೆಯೇ ಎಂಬುದನ್ನು ಭಾರತ ಪರಿಶೀಲನೆ ನಡೆಸಲಾಗುತ್ತಿದೆ.
ಈ ಮಧ್ಯೆ ಐಎಎಫ್ ತನ್ನ ಮುಂಚೂಣಿಯ ಯುದ್ಧ ವಿಮಾನ ಮತ್ತು ಹೆಲಿಕಾಪ್ಟರ್ಗಳನ್ನು ಹಗಲು ಮತ್ತು ರಾತ್ರಿ ಕಾರ್ಯಾಚರಣೆ ಮಾಡುವ ಮೂಲಕ ಚೀನಾದ ಮೇಲೆ ಒತ್ತಡ ಹೇರುತ್ತಲೇ ಇದೆ ಎಂದು ಮೂಲಗಳು ತಿಳಿಸಿವೆ.